ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಕ್ರಮ ನಡೆಯುತ್ತಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆಲ್ಲಲು ಹೊರಟಿದ್ದಾರೆ. 2002ರ ಉಪ ಚುನಾವಣೆಯಲ್ಲಿ ಏನಾಯಿತು. ದೇವನಹಳ್ಳಿ, ಮೈಸೂರು, ಶಿಡ್ಲಘಟ್ಟದಿಂದ ಕಳ್ಳ ಮತದಾನಕ್ಕೆ ನೀವು ಕರೆ ತಂದಿದ್ದ ಜನರ ಬಟ್ಟೆ ಬಿಚ್ಚಿಸಿ ಚಡ್ಡಿಯಲ್ಲಿ ಕೂರಿಸಿದ್ದು ನೆನಪಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ನಾಯಕ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜಕೀಯವಾಗಿ ಮುಗಿಸಲು ನನಗೆ ವಿಷ ಹಾಕಿದರು. ನಮ್ಮ ಪಕ್ಷ ನಾಶ ಮಾಡಲು ಹೊರಟರು. ನನ್ನ ಮುಗಿಸಲು ಹಂತ ಹಂತವಾಗಿ ನೀವು ಏನ್ ಮಾಡಿದ್ದೀರಿ ನನಗೆ ಗೊತ್ತಿದೆ. ನನಗೆ ವಿಷ ಹಾಕಿದಿರಿ. ದೇವೇಗೌಡರ ಸುದೀರ್ಘ ರಾಜಕೀಯ ಇತಿಹಾಸಕ್ಕೆ ಕೊಳ್ಳಿ ಇಟ್ಟವರು ಅಂತಾ ಕಿಡಿ ಕಾರಿದರು.
ನಾನು ಆಸ್ಪತ್ರೆಗೆ ದಾಖಲಾಗುವ ಮೊದಲು ಮೈತ್ರಿ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ಹೇಳಲು ಈ ಮಾಧ್ಯಮಗೋಷ್ಠಿ, ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದೇವೆ. ನಾನು ಪ್ರಾರಂಭಿಕ ಹಂತದಲ್ಲಿ 3 ಸ್ಥಾನ ಕೇಳಿದ್ದೇನೆ. ಆದರೆ, ಬಿಜೆಪಿ ಹೈಕಮಾಂಡ್ ಹತ್ತಿರ ಸ್ಪಷ್ಟತೆಯಿಲ್ಲ. ನನ್ನ ಮನವಿಯನ್ನು ಗೌರವಯುತವಾಗಿ ಕಂಡಿದೆ ಎಂದರು.
ಟ್ರಬಲ್ ಶೂಟರ್ ಹೇಳಿಕೆ ಗಮನಿಸಿದ್ದೇನೆ. ಕುಕ್ಕರ್ ಹಂಚುವ ಕೆಲಸ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅವರು ವಾಣಿಜ್ಯ ತೆರಿಗೆ ಅಧಿಕಾರಿಗಳುನ್ನು ಕಳಿಸಿದ್ದರು. ಆದರೆ, ಅಲ್ಲಿ ಏನೂ ನಡೆದಿಲ್ಲ ಎಂದು ವರದಿ ನೀಡಿ ಮುಚ್ಚಿ ಹಾಕಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಕೂಡಲೇ ರಾಮನಗರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ಎಸ್ಪಿ ಅವರನ್ನು ವರ್ಗಾವಣೆ ಮಾಡಬೇಕು. ಅಕ್ರಮ ತಡೆಯದಿದ್ದರೆ ಕುಕ್ಕರ್, ಸೀರೆಗಳ ದಾಸ್ತಾನು ಪತ್ತೆ ಮಾಡಿ ಬೆಂಕಿ ಹಚ್ಚುವಂತೆ ನಮ್ಮ ಕಾರ್ಯಕರ್ತರಿಗೆ ನಾನೇ ಕರೆ ಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.