ಪ್ರಜಾಸ್ತ್ರ ವಿಶೇಷ ಸುದ್ದಿ
ಸಿಂದಗಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ದೇಶದ ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಾಟ ಮಾಡಬೇಕು ಎಂದು, ಬಾವುಟವನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಸರ್ಕಾರದಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಕೆಲಸ ನಡೆದಿದೆ.
ಇಷ್ಟು ವರ್ಷಗಳ ಕಾಲ ಖಾದಿಯಿಂದ ಮಾಡಿದ ಬಾವುಟ ತಯಾರಿಸಲಾಗುತಿತ್ತು. ಅದನ್ನೇ ಎಲ್ಲೆಡೆ ಹಾರಿಸಲಾಗುತಿತ್ತು. ಆದರೆ, ಫ್ಲ್ಯಾಗ್ ಕೋಡ್ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರ ಪಾಲಿಸ್ಟರ್ ಬಟ್ಟೆಯಿಂದ ಬಾವುಟ ಮಾಡಬಹುದು ಹಾಗೂ ಖಾಸಗಿ ಕಂಪನಿಯವರು ಮಾಡಬಹುದು ಎಂದು ಹೇಳಿತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದರೂ ಕೇಂದ್ರ ಸರ್ಕಾರ ಸೊಪ್ಪು ಹಾಕಲಿಲ್ಲ. ಅದರ ಪರಿಣಾಮ ಇಂದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗುತ್ತಿದೆ.
ಪಟ್ಟಣದಲ್ಲಿ ಸಿಂದಗಿ ಪುರಸಭೆವತಿಯಿಂದ 22 ರೂಪಾಯಿಗೆ ಮಾರಾಟ ಮಾಡಲಾಗುತ್ತಿರುವ ರಾಷ್ಟ್ರಧ್ವಜ ನೋಡಿದರೆ ಪ್ರತಿಯೊಬ್ಬರಿಗೂ ಆಕ್ರೋಶ ವ್ಯಕ್ತವಾಗುತ್ತೆ. ಯಾಕಂದರೆ, ಹರಿದು ಹೋಗಿರುವ, ಬೇಕಾಬಿಟ್ಟಿಯಾಗಿ ಕತ್ತರಿಸಿರುವ, ಸರಿಯಾಗಿ ಹೊಲಗೆ ಹಾಕದ, ಬಾವುಟದ ಮಧ್ಯದಲ್ಲಿರುವ ಅಶೋಕ ಚಕ್ರ ಸಹ ವೃತ್ತಾಕಾರವಿರದೆ ಸಂಪೂರ್ಣ ವಾಲಿಕೊಂಡಿದೆ. ಹೀಗೆ ಇಡೀ ಬಾವುಟವನ್ನು ಎಷ್ಟೊಂದು ರೀತಿಯಲ್ಲಿ ಅಪಮಾನ ಮಾಡಬೇಕು ಅಷ್ಟೊಂದು ರೀತಿಯಲ್ಲಿ ಮಾಡಲಾಗಿದೆ.
ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಯೊಬ್ಬರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇಶಾಭಿಮಾನದ ಬಗ್ಗೆ ಪಾಠ ಮಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಕೂಡಲೇ ಸ್ಥಳೀಯ ಆಡಳಿತ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಸರಿಯಾದ ಬಾವುಟವನ್ನು ಮಾರಾಟ ಮಾಡಬೇಕಿದೆ ಅನ್ನೋದು ಸ್ಥಳೀಯರ ಆಗ್ರಹವಾಗಿದೆ.