ಪ್ರಜಾಸ್ತ್ರ ಸುದ್ದಿ
ಮೈಸೂರು: ನಾಡಿನ ಖ್ಯಾತ ಗಾಯಕ ಲಕ್ಷ್ಮಿರಾಮ್ ಅವರ ಸಾರಥ್ಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವೈಭ್ರೆಂಟ್ ಮೈಸೂರು, ಪ್ರಜಾಸ್ತ್ರ ವೆಬ್ ಪತ್ರಿಕೆ ಸಿಂದಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ತನುಮನ ಸಂಸ್ಥೆ ವತಿಯಿಂದ ಕವಿಕಾವ್ಯ ಗಾನಯಾನ ಸಂಗೀತ ಕಾರ್ಯಕ್ರಮ ಹಾಗೂ ಕರುನಾಡ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ನಗರದ ದ್ವನ್ಯಾಲೋಕ ಸಭಾಭವನದಲ್ಲಿ ನವೆಂಬರ್ 30, ಬುಧವಾರ ಸಂಜೆ ನಡೆದ ಕಾರ್ಯಕ್ರಮವನ್ನು ಕನ್ನಡ ಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ಅವರು ಕಂಜರಾ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ನಾಡು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ವಿಶ್ವ ಭಾಷೆಗಳಲ್ಲಿ ಕನ್ನಡ ಭಾಷೆ ಹೇಗೆ ಶ್ರೇಷ್ಠವಾಗಿದೆ. ಅದನ್ನು ಉಳಿಸಿಕೊಂಡು ಹೋಗುವಲ್ಲಿ ನಾವೆಲ್ಲ ಏನು ಮಾಡಬೇಕು ಅನ್ನೋದರ ಕುರಿತು ತಿಳಿಸಿಕೊಟ್ಟರು.
ಮುಖ್ಯ ಶಿಕ್ಷಕರು, ಮೈಸೂರು ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ದುಂಡಯ್ಯನವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹಾಸನದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾದ ಡಾ.ಮಂಜುನಾಥ ಸೋಸಲೆ, ಮೈಸೂರಿನ ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ವೆಂಕಟೇಶ್ ಮೂರ್ತಿ, ವಕೀಲರಾದ ಎ.ಆರ್ ಕಾಂತರಾಜು, ವೈಭ್ರೆಂಟ್ ಮೈಸೂರು ದಿನ ಪತ್ರಿಕೆ ಸ್ಥಾನಿಕ ಸಂಪಾದಕರಾದ ಮಧುಕುಮಾರ್, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ನಾಡಿನ ಬೇರೆ ಬೇರೆ ಭಾಗದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರುನಾಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗಾಯಕರಾದ ಲಕ್ಷ್ಮಿರಾಮ್, ಮಾದೇಶ ಚಿಕ್ಕನಂದಿ, ರಮೇಶ ತಾಯೂರು, ಪುಷ್ಪಲತಾ ಎಸ್.ಸಿ, ನೀಲಾ.ಕೆ, ಲಕ್ಷ್ಮಿ ವಿ.ಆಚಾರ್ ಹಾಗೂ ನಾದಸಿರಿ ಸಂಗೀತ ಬಳಗದವರು ಯುವ ಕವಿಗಳು ರಚಿಸಿದ ಕವಿತೆಗಳನ್ನು ಹಾಡಿದರು. ಡಿ.ಸಿ ಶಿವಕುಮಾರ್( ಕೀಬೋರ್ಡ್), ರೋಶನ್ ಸೂರ್ಯ(ತಬಲ), ಕಿರಣ್(ರಿದಂಪ್ಯಾಡ್) ಸಾಥ್ ನೀಡಿದರು.