ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಈ ವೇಳೆ ಲಿಂಗಾಯತ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರ್ಪಡೆ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆಯಂತೆ.
ಗುರುವಾರ ಸಂಜೆ ಲಿಂಗಾಯತ ಸಮುದಾಯದ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಇಂದಿನ ಸಭೆಯ ಬಳಿಕ ಲಿಂಗಾಯತ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರ್ಪಡೆ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗ್ತಿದೆ.
ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆಯಿರುವ ಲಿಂಗಾಯತ ಸಮುದಾಯವನ್ನ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರ, ತಳವಾರ, ಪರಿವಾರ ಸಮುದಾಯಕ್ಕೆ ನ್ಯಾಯುತವಾಗಿ ಸಿಗಬೇಕಾದ ಪರಿಶಿಷ್ಟ ಪಂಗಡ ಸರ್ಟಿಫಿಕೇಟ್ ಕೊಡಲು ಹಿಂದೇಟು ಹಾಕ್ತಿದೆ ಎಂದು ಈ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರ್ತಿದ್ರೂ ನ್ಯಾಯ ಕೊಡದೆ ಅನ್ಯಾಯ ಮಾಡಲಾಗ್ತಿದೆ ಎಂದು ಕಿಡಿ ಕಾರಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿರುವ ತಳವಾರ-ಪರಿವಾರ ಸಮುದಾಯಕ್ಕೆ ಎಸ್ಟಿ ಸರ್ಟಿಫಿಕೇಟ್ ಕೊಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದ್ರೂ ರಾಜ್ಯ ಸರ್ಕಾರ ಕೆಲ ಪಟ್ಟಭದ್ರ ಹಿತಾಸಕ್ತಿಹೊಂದಿರುವ ರಾಜಕಾರಣಿಗಳು, ಸ್ವಾಮೀಜಿಗಳ ಕುತಂತ್ರಕ್ಕೆ ಮಣಿದು ಸಂವಿಧಾನಬದ್ಧವಾಗಿ ನಮ್ಗೆ ಸಿಗಬೇಕಿರುವ ಎಸ್ಟಿ ಪ್ರಮಾಣ ಪತ್ರ ನೀಡ್ತಿಲ್ಲವೆಂದು ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೀದರ, ಬಳ್ಳಾರಿ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿರುವ ಈ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.