ಸಿಂದಗಿ: ನಾಳೆ ಮಣ್ಣೆತ್ತಿನ ಅಮಾವಾಸ್ಯೆ. ಕಾರುಹುಣ್ಣಿಮೆ ಬಳಿಕ ಬರುವ ಅಮಾವಾಸ್ಯೆವಿದು. ಎತ್ತುಗಳನ್ನ ಶೃಂಗರಿಸಿ ಕರಿ ಹರಿದ ರೈತರು ಸೇರಿದಂತೆ ಪ್ರತಿಯೊಬ್ಬರು ನಾಳೆ ಮಣ್ಣೆತ್ತಿನ ಹಬ್ಬವನ್ನ ಸಡಗರದಿಂದ ಆಚರಿಸ್ತಾರೆ. ಆದ್ರೆ, ಮಣ್ಣೆತ್ತುಗಳು ಹೋಗಿ ಬಣ್ಣೆತ್ತು ಬಂದು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಕಳೆದ ಕೇವಲ 10 ವರ್ಷಗಳ ಹಿಂದೆ ಎಲ್ಲಿ ನೋಡಿದ್ರೂ ಮಣ್ಣೆತ್ತುಗಳು ಕಾಣಿಸ್ತಿದ್ವು. ಸಿಂದಗಿ ಪಟ್ಟಣದ ನೀಲಗಂಗಾ ದೇವಸ್ಥಾನದ ಬಳಿಯಿರುವ ಕುಂಬಾರ ಓಣಿಯಲ್ಲಿ ಹದಿನೈದು ದಿನಗಳ ಮೊದ್ಲೇ ಮಣ್ಣೆತ್ತುಗಳ ನಿರ್ಮಾಣ ಕಾರ್ಯ ಶುರುವಾಗ್ತಿತ್ತು. ಜನರು ಮುಂಚಿತವಾಗಿ ತಮಗೆ ಬೇಕಾದ ಅಳತೆಯ ಮಣ್ಣೆತ್ತುಗಳನ್ನ ಬುಕ್ ಮಾಡ್ತಿದ್ರು. ಆದ್ರೆ, ಅಂದು ಆ ಓಣಿಯ ಒಬ್ಬೇ ಒಬ್ಬರ ಮನೆಯಲ್ಲಿ ಮಣ್ಣೆತ್ತುಗಳು ಕಾಣಿಸೋದಿಲ್ಲ.
ಊರು ತುಂಬ ಹುಡುಕಿದ್ರೆ ಅಲ್ಲೊಬ್ಬರು, ಇಲ್ಲೊಬ್ಬರು ಮಣ್ಣೆತ್ತು ಮಾಡುವವರು ಸಿಗ್ತಾರೆ. ಜನ ಸಹ ಬಣ್ಣಕ್ಕೆ ಮರುಳಾಗಿ ಕಲರ್ ಕಲರ್ ಎತ್ತುಗಳನ್ನ ಖರೀದಿ ಮಾಡ್ತಾರೆ. ಗೋಲಗೇರಿ ರಸ್ತೆ ಬಳಿಯಿರುವ ಮಣ್ಣೆತ್ತು ವ್ಯಾಪಾರಿ ಮಹಾಂತ ಕುಂಬಾರ ಅವರು ಮಹಾರಾಷ್ಟ್ರದ ಅಕ್ಕಲಕೋಟದಿಂದ 20 ಸಾವಿರ ಮೌಲ್ಯದ ಬಣ್ಣೆದ ಎತ್ತುಗಳನ್ನ ತರಿಸಿದ್ದಾರೆ.
ಇಲ್ಲಿ ಒಂದು ಜೋಡು ಎತ್ತಿಗೆ 50 ರೂಪಾಯಿಂದ ಶುರುವಾಗಿ 80, 130, 300 ರೂಪಾಯಿ ತನಕ ಎತ್ತುಗಳನ್ನ ಮಾರಾಟ ಮಾಡಲಾಗುತ್ತೆ. ನಾಳೆ ಅಮಾವಾಸ್ಯೆ ಇರೋದ್ರಿಂದ ವ್ಯಾಪಾರವಾಗುತ್ತೆ ಅಂತಾರೆ. ಹೀಗಾಗಿ ನಗರದಲ್ಲಿ ಎಲ್ಲಿ ನೋಡಿದ್ರೂ ಬಣ್ಣದಿಂದ ಕೂಡಿದ ಎತ್ತುಗಳ ಭರಾಟೆ ಜೋರಾಗಿದೆ.
ಭೂಮಿತಾಯಿ ಮಕ್ಕಳ ಮಣ್ಣಿನ ಹಬ್ಬಕ್ಕೂ ಇಂದು ಆಧುನಿಕತೆಯ ಟಚ್ ಬಂದಿದೆ. ಹೀಗಾಗಿ ಮೂಲ ಸೊಗಡು ಮರೆಯಾಗಿ, ಹಿಂದಿನಿಂದ ಬಂದ ಆಚರಣೆ ಮಾಡಿದ್ರಾಯ್ತು ಅಂತಾ ಜನರು ಮಾಡ್ತಿದ್ದಾರೆ. ವ್ಯಾಪಾರಿಗಳಿಗೆ ಇದು ಜೀವನದ ಪ್ರಶ್ನೆ. ಪರಿಸರಕ್ಕೆ ಯಾರು ಹೊಣೆ?