ಪ್ರಜಾಸ್ತ್ರ ಸುದ್ದಿ
ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಶುಕ್ರವಾರ ತಡರಾತ್ರಿ ದರೋಡೆ ಪ್ರಕರಣವೊಂದು ನಡೆದಿದೆ. ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ಮಾಡಿ ಬರೋಬ್ಬರಿ 1.8 ಲಕ್ಷ ರೂಪಾಯಿ ದೋಚಿಕೊಂಡು ಹೋಗಲಾಗಿದೆ. ನಗರದ ದಳವಾಯಿ ಶಾಲೆ ಹತ್ತಿರ ಈ ಘಟನೆ ನಡೆದಿದೆ.
ಚಾಮರಾಜ ಮೊಹಲ್ಲಾ ನಿವಾಸಿಯಾದ ವ್ಯಾಪಾರಿ ಪ್ರೇಮಕುಮಾರ ಎಂಬುವರು ಬೈಕ್ ಮೇಲೆ ಮನೆಗೆ ಹೊರಟಿದ್ದಾರೆ. ಇವರನ್ನ ಹಿಂಬಾಲಿಸಿಕೊಂಡು ಬಂದ ಇಬ್ಬರು ಸುಖಾಸುಮ್ಮನೆ ಜಗಳ ಮಾಡಿದ್ದಾರೆ. ಪ್ರೇಮಕುಮಾರ ಅವರನ್ನ ಬೈಕ್ ನಿಂದ ಬೀಳಿಸಿ ಕೀ ಕಿತ್ತುಕೊಂಡು ಡಿಕ್ಕಿಯಲ್ಲಿರುವ ಹಣ ದೋಚಿ ಪರಾರಿಯಾಗಿದ್ದಾರೆ.
ದರೋಡೆಕೋರರಿಬ್ಬರು ವ್ಯಾಪಾರಿ ಮೇಲೆ ಹಲ್ಲೆ ಮಾಡಿರುವುದು, ಹಣ ದೋಚಿಕೊಂಡು ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.