ಪ್ರಜಾಸ್ತ್ರ ಸುದ್ದಿ
ವಿಜಯಪುರ: ಬಿಜೆಪಿ ಶಾಸಕರ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಕಾಂಗ್ರೆಸ್ ಶಾಸಕ ಶಿವಾನಂದ್ ಪಾಟೀಲ ನಡುವೆ ಮಾತಿನ ಜಟಾಪಟಿ ನಡೆದಿದೆ. ಶಾಸಕ ಶಿವಾನಂದ್ ಪಾಟೀಲ್ ಇದೀಗ ಶಾಸಕ ಯತ್ನಾಳಗೆ ಪಂಥಾಹ್ವಾನವೊಂದು ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಬ್ಬರು ಪಕ್ಷೇತರಾಗಿ ಸ್ಪರ್ಧಿಸೋಣ. ಸೋತವರು ರಾಜಕೀಯ ನಿವೃತ್ತಿ ಪಡೆಯೋಣ ಎಂದಿದ್ದಾರೆ.
ಯತ್ನಾಳ್ ಸಂಸದರಾಗುವಲ್ಲಿ ಅಂದು ನಾನು ಬಿಜೆಪಿ ಶಾಸಕನಾಗಿದ್ದ ನನ್ನ ಪಾತ್ರವೂ ಇದೆ. ಅದನ್ನು ಮರೆತು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಪಕ್ಷದ ಹೊರತಾಗಿಯೂ ರಾಜಕೀಯ ಶಕ್ತಿ ಹೊಂದಿದ್ದೇನೆ. ಜೆಡಿಎಸ್, ಬಿಜೆಪಿಯಿಂದಲೂ ಶಾಸಕನಾದವನು. ರಾಜಕೀಯವಾಗಿ ನನ್ನನ್ನು ಕೆಣಕುವ ಸಾಹಸ ಯತ್ನಾಳ್ ಮಾಡದಿರಲಿ. ವಿಜಯಪುರ, ಬಬಲೇಶ್ವರ ಸೇರಿ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಲು ಸಿದ್ಧ. ಯತ್ನಾಳಗೆ ಆ ಧೈರ್ಯ ಇದೆಯೇ ಎಂದಿದ್ದಾರೆ. ಈ ಮೂಲಕ ಶಾಸಕರಿಬ್ಬರ ನಡುವೆ ಜಟಾಪಟಿ ನಡೆದಿದೆ.