ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೆಲ ದಿನಗಳ ಹಿಂದೆ ಬಿಬಿಸಿ ನಿರ್ಮಾಣ ಮಾಡಿರುವ ‘ಇಂಡಿಯಾ:ದಿ ಮೋದಿ ಕ್ವಶ್ಚನ್’ ಅನ್ನೋ ಹೆಸರಿನ ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ಅದರ ಮೊದಲ ಎಪಿಸೋಡ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಇದೀಗ ಅದನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ. ವಿಶೇಷ ಎಮರ್ಜೆನ್ಸಿ ಪವರ್ ಬಳಿಸಿ ಭಾರತದ ಯುಟ್ಯೂಬ್ ಗಳಲ್ಲಿ ಪ್ರಸಾರವಾಗದಂತೆ ಬ್ಲಾಕ್ ಮಾಡಿದೆ. ಲಿಂಕ್ ಹಂಚಿಕೊಳ್ಳುವ ಟ್ವೀಟರ್ ಗಳನ್ನು ಬ್ಲಾಕ್ ಮಾಡಲು ತಿಳಿಸಿದೆ.
‘ಇಂಡಿಯಾ:ದಿ ಮೋದಿ ಕ್ವಶ್ಚನ್’ ಅನ್ನೋ ಡಾಕ್ಯುಮೆಂಟರಿ ಬಗ್ಗೆ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ, ಮೋದಿ ನೇತೃತ್ವದ ಸರ್ಕಾರ ಅದನ್ನು ಬ್ಲಾಕ್ ಮಾಡಿ ಎಲ್ಲರಿಗೂ ತಿಳಿಯುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ. ದೇಶ ಮುನ್ನಡೆಸುವ ಸರ್ಕಾರ ಒಂದು ಡಾಕ್ಯುಮೆಂಟರಿ ಬ್ಲಾಕ್ ಮಾಡಿಸುವಂತದ್ದು ಏನಿದೆ?
ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದ ಟೈಂನಲ್ಲಿ ಅಂದರೆ 2002, ಫೆಬ್ರವರಿ 27ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ 6 ಬೋಗಿಗಳಿಗೆ ಬೆಂಕಿ ಹೆಚ್ಚಲಾಯಿತು. ಇದರಿಂದಾಗಿ 59 ಜನರು ಜೀವ ಕಳೆದುಕೊಂಡರು. ಅನೇಕರು ತೀವ್ರವಾಗಿ ಗಾಯಗೊಂಡರು. ನಂತರ ಇದು ಗುಜರಾತಿನಲ್ಲಿ ದೊಡ್ಡ ಮಟ್ಟದ ಕೋಮು ಹಿಂಸಾಚಾರ ಸೃಷ್ಟಿಸಿತು. ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರ್ ವಾಜಪೇಯಿ ಅವರು ಸಿಎಂ ಆಗಿದ್ದ ಮೋದಿಗೆ ರಾಜನೀತಿ ಪಾಲಿಸು ಎಂದು ಸೂಕ್ಷ್ಮವಾಗಿ ಹೇಳಿದರು. ಅಂದರೆ ಘಟನೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸು ಎನ್ನುವುದಾಗಿತ್ತು. ಆದರೆ, ಮೋದಿ ಹಾಗೇ ಮಾಡಲಿಲ್ಲ.
ಅಂದು ಮೋದಿ ವಿಫಲವಾಗಿರುವುದು ಸೇರಿದಂತೆ ಅವರ ಇಮೇಜಿಗೆ ಧಕ್ಕೆಯಾಗುವಂತಹ ಅಂಶಗಳು ಈ ಸಾಕ್ಷ್ಯಚಿತ್ರದಲ್ಲಿ ಇವೆಯಂತೆ. ಹೀಗಾಗಿಯೇ ಕೇಂದ್ರ ಸರ್ಕಾರ ಇದನ್ನು ತಡೆದಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಇದು ಸಾಕ್ಷ್ಯಚಿತ್ರವಲ್ಲ, ಇದೊಂದು ರಾಜಕೀಯ ಪ್ರೇರಿತ ವಿಡಿಯೋ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೊಂದು ಕಡೆ ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಅನ್ನೋ ಆಕ್ರೋಶ ಸಹ ವ್ಯಕ್ತವಾಗಿದೆ.
2021ರ ಐಟಿ ಕಾಯ್ದೆಯ 16ನೇ ನಿಯಮದ ಪ್ರಕಾರ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ತುರ್ತು ಪರಿಸ್ಥಿತಿಯ ವೇಳೆ ಯಾವುದೇ ಮಾಹಿತಿಯನ್ನು ಅಂತರ್ಜಾಲದಿಂದ ತೆಗೆದು ಹಾಕುವ ಹಕ್ಕನ್ನು ಹೊಂದಿದೆ. ಈ ನಿಯಮ ಆಧರಿಸಿ ಮೋದಿ ಕುರಿತು ಬಿಬಿಸಿ ಮಾಡಿರುವ ಸಾಕ್ಷ್ಯಚಿತ್ರವನ್ನು ತಡೆ ಹಿಡಿಯಲಾಗಿದೆ.