ಪ್ರಜಾಸ್ತ್ರ ಸುದ್ದಿ
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಹಾಗೂ ಎಸ್ಪಿ ಪಕ್ಷದ ಯುವ ನಾಯಕ ಅಖಿಲೇಶ್ ಯಾದವ್ ಅವರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದರು.
ದೇಶದಲ್ಲಿ ನಿರುದ್ಯೋಗ ಮೊದಲ ದೊಡ್ಡ ಸಮಸ್ಯೆಯಾಗಿದೆ. ಹಣದುಬ್ಬರ ಎರಡನೇ ಸಮಸ್ಯೆಯಾಗಿದೆ. ಆದರೆ, ಪ್ರಧಾನಿ ಮೋದಿ, ಬಿಜೆಪಿ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಪಾರದರ್ಶಕ ಆಡಳಿತ ತರಲು ಬಯಸುವ ಮೋದಿ, ಬಿಜೆಪಿಗೆ ಹಣ ನೀಡಿದವರ ಹೆಸರು, ದಿನಾಂಕ ಯಾಕೆ ಮರೆ ಮಾಡಿದ್ದಾರೆ. ಚುನಾವಣಾ ಬಾಂಡ್ ಜಗತ್ತಿನ ಅತೀ ದೊಡ್ಡ ಭ್ರಷ್ಟಾಚಾರ ಎಂದರು.
ಚುನಾವಣೆ ಕುರಿತಂತೆ ಪ್ರತಿ ರಾಜ್ಯದಿಂದ ವರದಿ ಬರುತ್ತಿದೆ. ಅದರ ಪ್ರಕಾರ ನಾವು ಸುಧಾರಿಸಿದ್ದೇವೆ. ಉತ್ತರ ಪ್ರದೇಶದಲ್ಲಿ ಮೈತ್ರಿ ಗಟ್ಟಿಯಾಗಿದೆ. ನಾವು ಹೆಚ್ಚು ಸ್ಥಾನ ಗಳಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು. ಇದೇ ವೇಳೆ ಅಖಿಲೇಶ್ ಯಾದವ್ ಮಾತನಾಡಿ, 2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿ ಮನೆಗೆ ಹೋಗುತ್ತಾರೆ ಎಂದರು.