ಪ್ರಜಾಸ್ತ್ರ ಸುದ್ದಿ
ಬಲೋದ್(ಛತ್ತೀಸಗಡ): ಬುಲೆರೊ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಜನ ದುರ್ಮರಣ ಹೊಂದಿದ ಘಟನೆ ಧಮ್ತಾರಿ ಜಿಲ್ಲೆಯ ಜಾಗತ್ರ ಹತ್ತಿರ ಕಳೆದ ರಾತ್ರಿ ನಡೆದಿದೆ. ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಸೊರೆಮ್ ಗ್ರಾಮದ ಸಾಹು ಕುಟುಂಬಸ್ಥರು ಕಂಕೇರ್ ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ ಹೊರಟಿದ್ದರು. ಜಾಗತ್ರ ಎಂಬಲ್ಲಿ ಸಂಚರಿಸುತ್ತಿದ್ದಾಗ ಎದುರಿಗೆ ಬಂದ ಟ್ರಕ್ ಬುಲೆರೊಗೆ ಡಿಕ್ಕಿ ಹೊಡೆದ ಈ ದುರಂತ ನಡೆದಿದೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ.
ಪೊಲೀಸರು ತಡರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿದರು. ಘಟನೆ ಕುರಿತು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಂತಾಪ ಸೂಚಿಸಿದ್ದು, ಬಾಲಕಿ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಬಲೋದ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.