ಪ್ರಜಾಸ್ತ್ರ ಸುದ್ದಿ
ಬೆಂಗಳೂರು/ವಿಜಯಪುರ: ಜಿಲ್ಲೆಯ ಸಿಂದಗಿ ಠಾಣೆ ಪೊಲೀಸರ ವಿರುದ್ಧವೇ ಬೆಂಗಳೂರಿನಲ್ಲಿ ನೌಕರಿ ಮಾಡ್ತಿರುವ ಹೆಡ್ ಕಾನ್ಸ್ ಟೇಬಲ್ ವೊಬ್ಬರು ಕೊಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು, ತಮ್ಮ ತಂದೆಯ ಕೊಲೆ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದ್ದಾರೆ.
ಬಸವರಾಜ ಪಾಟೀಲ ಎಂಬುವರು ಸಿಂದಗಿ ತಾಲೂಕಿನ ಬಂಟನೂರು ಗ್ರಾಮದವರಾಗಿದ್ದು, ಕಳೆದ 13 ವರ್ಷಗಳಿಂದ ಬೆಂಗಳೂರಿನಲ್ಲಿ ಪೊಲೀಸ್ ಸೇವೆ ಸಲ್ಲಿಸ್ತಿದ್ದಾರೆ. ಸಿಂದಗಿ ಠಾಣೆ ಪೊಲೀಸರು ದೌರ್ಜನ್ಯವೆಸಗಿ ನನ್ನ ತಂದೆ ಸಾಯಿಯುವಂತೆ ಮಾಡಿದ್ದಾರೆ. ತಾಯಿ ಹಾಗೂ ಸಹೋದರನ ಮೇಲೆ ಹಲ್ಲೆ ಮಾಡಿದ್ದು ಅವರು ಚೇತರಿಸಿಕೊಳ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
6 ನಿಮಿಷಕ್ಕೂ ಅಧಿಕವಿರುವ ವಿಡಿಯೋದಲ್ಲಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಪ್ರತಿಗಳನ್ನ, ತಂದೆ, ತಾಯಿ ಹಾಗೂ ಸಹೋದರನ ಫೋಟೋಗಳನ್ನ ಪ್ರದರ್ಶನ ಮಾಡಿದ್ದಾರೆ. ಇಡೀ ಘಟನೆ ಸಂಬಂಧ ಗೃಹ ಸಚಿವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ ನ್ಯಾಯ ಕೊಡಿಸಿಕೊಡಬೇಕು ಎಂದು ಹೇಳಿದ್ದಾರೆ. ಈಗಾಗ್ಲೇ ಸಾಕಷ್ಟು ವೈರಲ್ ಆಗಿರುವ ವಿಡಿಯೋ ತಾಲೂಕಿನಾದ್ಯಂತ ಹಲವು ಪ್ರಶ್ನೆಗಳನ್ನ ಮೂಡಿಸಿದೆ.