ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ದೊಡ್ಡಮಟ್ಟದ ವಿವಾದ ಹುಟ್ಟು ಹಾಕಿದೆ. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಸಾಹಿತಿಗಳು, ಸಂಘಟನೆಗಳು, ಸ್ವಾಮೀಜಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಕುವೆಂಪು ಅವರ ವಿಚಾರದಲ್ಲಿ ಒಕ್ಕಲಿಗ ಸಮುದಾಯ ಸಿಡಿದು ನಿಂತಿದೆ. ಬಸವಣ್ಣನವರ ವಿಚಾರದಲ್ಲಿ ಲಿಂಗಾಯತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ದೊಡ್ಡ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ತಮ್ಮ ರಾಜಕೀಯ ಜೀವನದಲ್ಲಿ ದೊಡ್ಡ ಕಪ್ಪು ಚುಕ್ಕೆಯಾಗಿ ಉಳಿಯುವ ಇಂತಹ ವಿಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ.
ಒಂದು ಕಡೆ ಸಾಹಿತಿಗಳ ಆಕ್ರೋಶ, ರಾಜೀನಾಮೆ. ಮತ್ತೊಂದು ಕಡೆ ಸಂಘಟನೆಗಳ ಹೋರಾಟ, ಪ್ರತಿಭಟನೆ. ಮಗದೊಂದು ಕಡೆ ಸ್ವಾಮೀಜಿಗಳು ಮುಖ್ಯಮಂತ್ರಿಗೆ ಪತ್ರ ಬರೆಯುತ್ತಿರುವುದು. ಇತಿಹಾಸದಲ್ಲಿ ತಮ್ಮ ಹೆಸರು ವಿವಾದಾತ್ಮಕವಾಗಿ ಉಳಿಯಬಾರದು ಅನ್ನೋ ಕಾರಣಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಪರಷ್ಕರಣೆಯಾಗಿರುವ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ತಿದ್ದುಪಡಿ ಮಾಡಿ ಮರುಮುದ್ರಣಗೊಂಡ ನಂತರ ಶಾಲೆಗಳಿಗೆ ವಿತರಣೆ ಮಾಡುವ ಬಗ್ಗೆ ಯೋಚಿಸಿದ್ದಾರೆ ಅನ್ನೋದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಮಕ್ಕಳ ಶೈಕ್ಷಣಿಕಕ್ಕೆ ಹೊಡೆತ
ಪಠ್ಯಪುಸ್ತಕ ಪರಿಷ್ಕರಣೆ ವಿವಾದಿಂದ ಈಗಾಗ್ಲೇ ಶಾಲಾ ಮಕ್ಕಳಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಅವರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇದರ ನಡುವೆ ಅವರಿಗೆ ದೊಡ್ಡ ಹೊಡೆತ ಬೀಳುವುದು, ಸರಿಯಾದ ಸಮಯಕ್ಕೆ ಪಠ್ಯಪುಸ್ತಕ ಸಿಗುವುದಿಲ್ಲ. ಕೋವಿಡ್ ನಿಂದ ಕಳೆದ ಎರಡು ವರ್ಷ ಶೈಕ್ಷಣಿಕ ಹೊಡೆತ ಬಿದ್ದಿದೆ. ಇದೀಗ ಮತ್ತೆ ವಿದ್ಯಾರ್ಥಿಗಳಿಗೆ ದೊಡ್ಡ ಹೊಡೆತ ಬೀಳುವುದು ಪಕ್ಕಾ.