ಪ್ರಜಾಸ್ತ್ರ ಸುದ್ದಿ
ಹಾಸನ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೋ ಈಗ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಜನಸಾಮಾನ್ಯರು ಟೊಮೆಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಯಾಕಂದರೆ ಕೆಜಿಗೆ 180ರಿಂದ 200 ರೂಪಾಯಿ ತನಕ ಮಾರಾಟವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಹೊಲದಲ್ಲಿನ ಟೊಮೆಟೊ ಕದ್ದಿರುವ ಘಟನೆ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ನಡೆದಿದೆ.
ರೈತ ಮಹಿಳೆ ಧರಣಿ ಎಂಬುವರ ಹೊಲದಲ್ಲಿ ಬೆಳೆದಿದ್ದ ಟೊಮೆಟೊವನ್ನು ಕಳ್ಳರು ಕಳೆದ ರಾತ್ರ ಕದ್ದಿದ್ದಾರೆ. ಇದರಿಂದಾಗಿ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ. ಹುರುಳಿ ಬೆಳೆಯಲ್ಲಿ ನಷ್ಟ ಅನುಭವಿಸಿದ್ದರು. ಹೀಗಾಗಿ ಟೊಮೆಟೊ ಬೆಳೆದಿದ್ದು. ಬೆಲೆ ಚೆನ್ನಾಗಿರುವುದರಿಂದ ಬೆಂಗಳೂರಿನಲ್ಲಿ ಮಾರಾಟ ಮಾಡಿ ಮಾಡಿರುವ ಸಾಲ ತೀರಿಸುವ ಖುಷಿಯಲ್ಲಿದ್ದರು. ಆದರೆ, ಕಳ್ಳರು ಅವರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ.
ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಅಂದಾಜು 60 ಚೀಲ ಟೊಮೆಟೊ ಕಳ್ಳತನವಾಗಿದೆಯಂತೆ. ಇಂದು ಮುಂಜಾನೆ ಹೊಲಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.