ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆದು ಹಂತ ಹಂತವಾಗಿ ತಹಶೀಲ್ದಾರ್ ಹುದ್ದೆಯ ತನಕ ಬಂದು ಕೆ.ಆರ್ ಪುರಂ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದ ಅಜಿತ್ ರೈ 500 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ ಆರೋಪವಿದೆ. ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗ ಇಂತಹ ಅಧಿಕಾರಿಗೆ ಶಿಕ್ಷೆ ಬದಲು ವರ್ಗಾವಣೆ ಮಾಡಿದ ಸರ್ಕಾರದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಅಜಿತ್ ರೈಗೆ ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಗ್ರೇಡ್-2 ತಹಶೀಲ್ದಾರ್ ಆಗಿ ಹಿಂಬಡ್ತಿಯ ಮೇಲೆ ವರ್ಗಾವಣೆ ಮಾಡಲಾಗಿದೆ. ಈ ಜಾಗದಲ್ಲಿ ಪರಶುರಾಮ ಅನ್ನೋ ಅಧಿಕಾರಿ 500 ರೂಪಾಯಿ ಲಂಚ ಸ್ವೀಕಾರ ಆರೋಪದಡಿ ಲೋಕಾಯುಕ್ತಕ್ಕೆ ಸಿಕ್ಕು ಅಮಾನತುಗೊಂಡಿದ್ದರೆ, 500 ಕೋಟಿಗೂ ಅಧಿಕ ಅಕ್ರಮ ಆಸ್ತಿ ಮಾಡಿದ ಆರೋಪ ಹೊತ್ತಿರುವ ಅಜಿತ್ ರೈಗೆ ಆ ಜಾಗ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಯಾರನ್ನು ಬಿಡಲ್ಲ ಅಂತಾ ಹೇಳುವವರೆ ಈ ರೀತಿ ನಡೆದುಕೊಂಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.