ಪ್ರಜಾಸ್ತ್ರ ಸುದ್ದಿ
ಪಾಟ್ನಾ: ದೇಶದಲ್ಲಿ ಒಂದು ಕಡೆ ಕೋಮುಸೌಹಾರ್ದತೆ ಹಾಳು ಮಾಡುವ ಘಟನೆಗಳು ನಡೆಯುತ್ತಿವೆ. ಇನ್ನೊಂದು ಕಡೆ ಅದನ್ನು ಉಳಿಸುವ ಕೆಲಸ ಹಿಂದು-ಮುಸ್ಲೀಂ ಸಹೋದರರಿಂದ ಆಗುತ್ತಿವೆ. ಪೂರ್ವ ಚಂಪಾರಾಣ್ ಜಿಲ್ಲೆಯ ಕೈತ್ವಾಲಿಯಾದಲ್ಲಿ ವಿಶ್ವದ ಅತಿ ದೊಡ್ಡ ಹಿಂದು ದೇಗುಲ ನಿರ್ಮಾಣಕ್ಕೆ ಮುಸ್ಲೀಂ ಕುಟುಂಬ ಭೂಮಿಯನ್ನು ದಾನವಾಗಿ ನೀಡಿದೆ.
ಗುವಾಹಟಿ ಮೂಲದ ಉದ್ಯಮಿ ಇಶ್ತಿಯಾಕ್ ಅಹ್ಮದ್ ಖಾನ್ ಅವರು, ತಮ್ಮ ಕುಟುಂಬಕ್ಕೆ ಸೇರಿದ 2.5 ಕೋಟಿ ಮೌಲ್ಯದ ಭೂಮಿಯನ್ನು ದಾನವಾಗಿ ನೀಡಿದೆ. ಇಲ್ಲಿ ವಿರಾಟ್ ರಾಮಾಯಾಣ ಮಂದಿರ ನಿರ್ಮಾಣವಾಗುತ್ತಿದೆ. ಮಹಾವೀರ ಮಂದಿರ ಟ್ರಸ್ಟ್ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್ ಇಶ್ತಿಯಾಕ್ ಅಹ್ಮದ್ ಕುಟುಂಬಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಮಹಾವೀರ ಮಂದಿರ ಟ್ರಸ್ಟ್ ಇದುವರೆಗೂ 125 ಎಕರೆ ಭೂಮಿಯನ್ನು ಪಡೆದುಕೊಂಡಿದೆ. ಇನ್ನು 25 ಎಕರೆ ಭೂಮಿಯನ್ನು ಪಡೆಯಲಿದೆಯಂತೆ. ವಿರಾಟ್ ರಾಮಾಯಣ ಮಂದಿರವೂ 215 ಅಡಿ ಎತ್ತರದ ಕಾಂಬೋಡಿಯಾದ ವಿಶ್ವಪ್ರಸಿದ್ಧ ಅಂಕೋರ್ ವಾಟ್ ಸಂಕೀರ್ಣಕ್ಕಿಂತ ದೊಡ್ಡದಾಗಿರಲಿದೆ. ಇಲ್ಲಿ 18 ದೇವಾಲಯಗಳು ಇರಲಿವೆ. ಇದರಲ್ಲಿ ಶಿವ ದೇವಾಲಯದ ಶಿವಲಿಂಗ ವಿಶ್ವದ ಅತಿದೊಡ್ಡದಾಗಿರಲಿದೆ. ಅದಕ್ಕಾಗಿ ಸುಮಾರು 500 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.