ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಕಾಲೇಜು ಕಟ್ಟಡದಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಶರಾವತಿ ನಗರದ ಖಾಸಗಿ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ. ಮೇಘಶ್ರೀ ಮೃತ ವಿದ್ಯಾರ್ಥಿನಿ.
ಮೃತ ವಿದ್ಯಾರ್ಥಿನಿ ಪೋಷಕರು ಇದು ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕಿರುಕುಳದಿಂದ ಹೀಗೆ ಮಾಡಿಕೊಂಡಿದ್ದಾಳೆ. ಒಂದು ನಿಮಿಷ ತಡವಾಗಿ ಬಂದರೂ ಬಿಸಿಲಲ್ಲಿ ಹೊರಗೆ ನಿಲ್ಲಿಸುವುದು, ಹಬ್ಬಕ್ಕೆ ಊರಿಗೆ ಹೋಗಿ ಬಂದರೆ ಬೈಯುವುದು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇಂದು ಜೀವಶಾಸ್ತ್ರ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಶೌಚಾಲಯಕ್ಕೆಂದು ಹೊರಗೆ ಬಂದಿದ್ದಾಳೆ. ಕಟ್ಟಡದಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ ಎಂದು ಕಾಲೇಜಿನವರು ಹೇಳುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ತನಿಖೆಯಿಂದಲೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ.