ಇವತ್ತಿನ ಫಾಸ್ಟ್ ಫುಡ್ ಲೈಫ್ ನಲ್ಲಿ ಯಾವುದಕ್ಕೂ ಸಮಯವಿಲ್ಲ. ಇದ್ದರೂ ಅದನ್ನ ಹೇಗೆ ಉಪಯೋಗಿಸಬೇಕು ಅನ್ನೋದು ತುಂಬಾ ಜನಕ್ಕೆ ಗೊತ್ತಿರುವುದಿಲ್ಲ. ಹೀಗಾಗಿ ನೋ ಟೈಂ ಅನ್ನುತ್ತಲೇ ಇರ್ತಾರೆ. ಇಂಥಾ ಹೊತ್ತಿನಲ್ಲಿ ಪುಸ್ತಕ ಓದುವುದು ಅಂದರೆ ಅನೇಕರಿಗೆ ಇಷ್ಟವಿಲ್ಲ. ಓದಬೇಕು ಅಂದುಕೊಳ್ಳವರಿಗೆ ಸರಿಯಾಗಿ ಗ್ರಂಥಾಲಯ ಸಿಗೋದಿಲ್ಲ. ಇಂಥಾ ಓದುಗರಿಗೆ ಈ ರೀತಿಯ ಆಲೋಚನೆ ಖುಷಿ ನೀಡುತ್ತೆ. ಇಲ್ಲೊಂದು ರಸ್ತೆ ಅಂಚಿಗೊಂದು ಪುಟ್ಟ ಗ್ರಂಥಾಲಯ ತೆರೆಯಲಾಗಿದೆ.
ಈ ಐಡಿಯಾ ಮಾಡಿದವರು ನಿಜಕ್ಕೂ ಓದಿನ ಬಗ್ಗೆ ಕಾಳಜಿ ಇದ್ದವರೆ ಇರಬೇಕು. ಅಂದ್ಹಾಗೆ ಈ ರಸ್ತೆ ಬದಿಯ ಲೈಬ್ರರಿ ಕಾಣಿಸೋದು ನಮ್ಮದೆ ನೆಲದ ಮಿಜೋರಾಂ ರಾಜಧಾನಿ ಐಜಾಲ್ ನಲ್ಲಿ. ಈ ಸಿಟಿಯಲ್ಲಿ ಇಂಥಾ ಎರಡು ಪುಟಾಣಿ ಗ್ರಂಥಾಲಯ ಓಪನ್ ಮಾಡಲಾಗಿದೆ. ವಾಕ್ ಮಾಡುವವರು, ಯಾರಿಗೋ ಕಾಯುತ್ತಾ ನಿಂತಿರುವವರು ಇಲ್ಲಿರುವ ಪುಸ್ತಕಗಳನ್ನ ತೆಗೆದುಕೊಂಡು ಓದಬಹುದು. ವ್ಯರ್ಥವಾಗಿ ಸಮಯ ಕಳೆಯುವ ಬದಲು ಒಂದಿಷ್ಟು ಓದಿ ಜ್ಞಾನದ ಜೊತೆಗೆ ಮನಸ್ಸನ್ನ ಒಳ್ಳೆಯದರ ಕಡೆಗೆ ತೆಗೆದುಕೊಂಡು ಹೋಗಬಹುದು.
ಇದಕ್ಕೆ ಯಾವುದೇ ರೀತಿ ಶುಲ್ಕವಿಲ್ಲ. ಯಾರೂ ಕಾವಲುಗಾರರಿಲ್ಲ. ಪುಸ್ತಕ ತೆಗೆದುಕೊಳ್ಳಿ. ಪುಸ್ತಕ ಇಲ್ಲಿಯೇ ಇಡಿ ಅನ್ನೋ ಸಾಲುಗಳನ್ನ ಬರೆದಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ತಿದ್ದಾರೆ. ಈ ಹಿಂದೆ ‘ಕರುಣೆಯ ಗೋಡೆ’ ಪರಿಕಲ್ಪನೆ ಬಗ್ಗೆ ಕೇಳಿದವರು, ನೋಡಿದವರಿಗೆ ಇದು ಇನ್ನಷ್ಟು ಹತ್ತಿರವಾಗುತ್ತೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ‘ಯಾವ ದೇಶದಲ್ಲಿ ದೇಗುಲಗಳಿಗಿಂತ ಶಾಲೆ ಹೆಚ್ಚಿರುತ್ತವೆಯೋ ಆ ದೇಶ ಶ್ರೀಮಂತ ದೇಶ’ವೆಂದು ಹೇಳಿದ್ದಾರೆ. ಒಂದು ದೇಶವನ್ನ ಸದೃಢವಾಗಿ ಕಟ್ಟುವಲ್ಲಿ ಶಿಕ್ಷಣದ ಪಾತ್ರ ಬಹುದೊಡ್ಡದಿದೆ. ಈ ರೀತಿ ಓಪನ್ ಲೈಬ್ರರಿಗಳು ವಿದೇಶದಲ್ಲಿ ಸಾಕಷ್ಟು ನೋಡುತ್ತೇವೆ. ಇದನ್ನ ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದು ಉತ್ತಮ.