ಸಿಂದಗಿ: ಪಟ್ಟಣದ ಸಿಂದಗಿ-ಯಂಕಂಚಿ ಬೈಪಾಸ್ ಬಳಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಇದ್ರಿಂದಾಗಿ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಎಲ್ಲರನ್ನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗ್ತಿದೆ.
ಬೆಳಗ್ಗೆ ಸುಮಾರು 7.30ರಿಂದ 8 ಗಂಟೆ ಟೈಂನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸುಮಾರು 10 ರಿಂದ 12 ಜನರ ಸ್ಥಿತಿ ಗಂಭೀರವಾಗಿದೆ. ಇನ್ನು ಆತಂಕದ ವಿಚಾರವೆಂದರೆ ಬಸ್ ನಲ್ಲಿ ಬಹುತೇಕರು ವಿದ್ಯಾರ್ಥಿಗಳಿದ್ರು ಅನ್ನೋದು. ಪದವಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗೆ ಬರ್ತಿದ್ದ ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಕೆಲ ವಿದ್ಯಾರ್ಥಿಗಳ ಕೈ, ಕಾಲು, ಬೆನ್ನು, ಕಿವಿಗೆ ಗಂಭೀರ ಗಾಯಗಳಾಗಿವೆ. ಶ್ರೀದೇವಿ ಬಿರಾದಾರ ಅನ್ನೋ ವಿದ್ಯಾರ್ಥಿನಿಯ ಕೈಯೊಂದು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಿಂದಾಗಿ ತಾಲೂಕಿನ ಜನತೆ ತಂಡೋಪ ತಂಡವಾಗಿ ಸರ್ಕಾರಿ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಸಂಬಂಧಿಕರು ಕಣ್ಣೀರು ಹಾಕ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಬಂದಿದ್ದು ಮಾಹಿತಿ ಪಡೆದುಕೊಳ್ತಿದ್ದಾರೆ.
ಪರಶುರಾಮ ಕುದರಗೊಂಡ, ಸೋಯಲ ಮಳ್ಳಿ, ಹಣಮಂತರಾಯ ಪೂಜಾರಿ, ಹಣಮಂತ ದೊಡ್ಡಮನಿ, ಉಪೇಂದ್ರ ಚೌಹಾಣ, ಸಂಗಪ್ಪ ಪೂಜಾರಿ, ಗಂಗಮ್ಮ ಕೋರವಾರ, ಬಾಳಮ್ಮ ಕೋರವಾರ, ನಿಂಗಪ್ಪ ಸದಬ, ಬಾಗೇಶ ರೆಬಿನಾಳ, ಭೀರಪ್ಪ ಡಂಬಳ, ಮಹ್ಮದ ಚೌಧರಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಯಡ್ರಾಮಿ-ಸಿಂದಗಿ ಬಸ್ ಪಟ್ಟಣದ ಕಡೆ ಬರ್ತಿದೆ. ಡಿಸೈಲ್ ಲಾರಿ ವಿಜಯಪುರಿಂದ ಕಲಬುರಗಿ ಕಡೆ ಹೊರಟಿದೆ. ಈ ವೇಳೆ ಸರ್ಕಾರಿ ಬಸ್ ಚಾಲಕನ ವೇಗದಿಂದಾಗಿ ಅನಾಹುತ ಸಂಭವಿಸಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಹೇಳುವ ಪ್ರಕಾರ, ವಿದ್ಯಾರ್ಥಿಗಳು ಹೇಳಿದ್ರೂ ಕೇಳದೆ ಡ್ರೈವರ್ ಅತಿವೇಗವಾಗಿ ಬಸ್ ಚಲಾಯಿಸಿದ್ದು ಇಷ್ಟೊಂದು ದೊಡ್ಡ ಅನಾಹುತಕ್ಕೆ ಕಾರಣ ಎನ್ನಲಾಗ್ತಿದೆ. ಬಿಂಜಲಬಾವಿ-ಸಿಂದಗಿ ಬಸ್ ಪಂಚರ್ ಆದ ಪರಿಣಾಮ ಗೋಲಿಗೇರಿ ಯಡ್ರಾಮಿ ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸ್ತಿದ್ದರು ಅಂತಾ ತಿಳಿದು ಬಂದಿದೆ. ತಾಲೂಕು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.