ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ರಾಜ್ಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಪರಮೇಶ್ವರ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಸುಮಾರು 14 ನಾಯಕರು ಭಾಗವಹಿಸಿದ್ದರು. ಸ್ಥಳೀಯ ನಾಯಕತ್ವದ ಮೇಲೆ ಹೆಚ್ಚು ವಿಶ್ವಾಸ ಇಡುವ ಕುರಿತು ಚರ್ಚೆ ನಡೆದಿದೆ.
ಹಿಮಾಚಲ ಪ್ರದೇಶದ ಫಲಿತಾಂಶ ಕಾಂಗ್ರೆಸ್ ಗೆ ಒಂದಿಷ್ಟು ಶಕ್ತಿ ತುಂಬಿದೆ. ಹೀಗಾಗಿ ಎಲ್ಲಿ ಸ್ಥಳೀಯ ನಾಯಕತ್ವ ಗಟ್ಟಿಯಾಗಿದೆಯೋ ಅಲ್ಲಿ ಹೆದರುವ ಅಗತ್ಯವಿಲ್ಲ. ಜೊತೆಗೆ ಗುಜರಾತ್ ಫಲಿತಾಂಶ ನೋಡಿ ರಾಜ್ಯ ರಾಜಕಾರಣದ ಬಗ್ಗೆ ಯೋಚಿಸಬೇಕಿಲ್ಲ. ಕರ್ನಾಟಕದ ರಾಜಕೀಯ ಹೇಗಿದೆ ಅದರ ಆಧಾರದ ಮೇಲೆ ರಣತಂತ್ರಗಳನ್ನು ಹೆಣಿಯುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.