ಪ್ರಜಾಸ್ತ್ರ ಸಿನಿಮಾ ಸುದ್ದಿ
ನಟ ದಿವಂಗತ ಅಂಬರೀಶ್ ಅವರ ಪುತ್ರ ಅಭಿಷೇಕ್ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ಬೀಗರ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಭಾಗದಲ್ಲಿ ಬೀಗರ ಊಟ ಅಂದರೆ ಮಾಂಸಹಾರ ಮಾಡಿಸಲಾಗುತ್ತೆ. ಅದರಂತೆ ಭರ್ಜರಿ ಬಾಡೂಟ ಮಾಡಿಸಲಾಗಿದೆ. ಆದರೆ, ಈ ವೇಳೆ ಗಲಾಟೆಯಾಗಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಹತ್ತಿರ 15 ಎಕರೆ ವಿಸ್ತೀರ್ಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 7 ಟನ್ ಮಟನ್, 8 ಟನ್ ಚಿಕನ್ ನಲ್ಲಿ ವಿವಿಧ ರೀತಿಯ ಅಡುಗೆ ಮಾಡಲಾಗಿದೆ. ಕಾರ್ಯಕ್ರಮ ಶುರುವಾದ ಕೆಲ ಗಂಟೆಗಲ್ಲೇ ಜನರು ಊಟಕ್ಕೆ ನುಗ್ಗಿ ಬಿಟ್ಟರು. ಹೀಗಾಗಿ ಲಾಠಿ ಪ್ರಹಾರ ನಡೆದಿದೆ.
ಈ ರೀತಿ ಮಾಡುವುದಾದರೆ ಯಾಕೆ ಆಹ್ವಾನ ನೀಡಬೇಕಿತ್ತು ಅನ್ನೋ ಮಾತುಗಳು ಕೇಳಿ ಬಂದವು. ಇದರಿಂದ ಬೇಸರಗೊಂಡ ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ಊಟದ ಕೊರತೆ ಅನ್ನೋದು ಸುಳ್ಳು. ಯಾರೋ ಜನರಿಗೆ ಪ್ರಚೋದನೆ ನೀಡಿದ್ದಾರೆ. ಹೀಗಾಗಿ ಬಿಸಿಲಲ್ಲಿದ್ದ ಜನರು ಸಹಜವಾಗಿ ಅಡುಗೆ ಮನೆ ಕಡೆ ನುಗ್ಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲಾಗದೆ ಪೊಲೀಸರು ಸಹ ಕಷ್ಟಪಟ್ಟಿದ್ದಾರೆ. ಅಂಬರೀಶ್ ಅಭಿಮಾನಿಗಳಲ್ಲಿ ಕೈ ಮುಗಿದು ಕ್ಷಮೆ ಕೇಳ್ತೀನಿ. ಏನೇ ಆಗಿದ್ದರೂ ಜವಾಬ್ದಾರಿ ನಾನೇ.
ಪ್ರೀತಿ ವಿಶ್ವಾಸದಿಂದ ಅಂಬರೀಶಣ್ಣನ ಮಗನ ಮದುವೆ. ಆಶೀರ್ವಾದ ಮಾಡಬೇಕು ಅಂತಾ ಬಂದಿದ್ದರು. ಕರೆಸಿ ಊಟ ಇಲ್ಲದೆ ಕಳಿಸಬೇಕು ಅನ್ನೋ ಉದ್ದೇಶ ಇರಲಿಲ್ಲ. ಎಲ್ಲರಿಗೂ ಊಟ ನೀಡಬೇಕು ಅಂತಾನೆ ಕರೆಸಿದ್ದು. ಇದು ನಮಗೂ ಮೊದಲು. ಒಮ್ಮೊಮ್ಮೆ ಆಗುತ್ತೆ. ಇದರಲ್ಲಿ ಯಾರದೂ ತಪ್ಪಿಲ್ಲ. ಮತ್ತೊಮ್ಮೆ ಕ್ಷಮೆ ಕೇಳ್ತೀನಿ ಅಂತಾ ಹೇಳಿದ್ದಾರೆ.