ಧಾರವಾಡ: ಕನ್ನಡದ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರಾದ ಶ್ರೀಪರಮಾತ್ಮಾಜಿ ಮಹಾರಾಜರು ತಮ್ಮ ವಿಶಿಷ್ಟ ಬರವಣಿಗೆಯ ಮೂಲಕವೇ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಸಂಸ್ಕೃತ ಭಾಷೆಯ ಆಳವಾದ ಜ್ಞಾನ ಅವರ ಕನ್ನಡವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎಂದು ವಿಮರ್ಶಕರಾದ ಡಾ.ಗೋವಿಂದರಾಜ ತಲಕೋಡ ಹೇಳಿದರು.
ಕಲಘಟಗಿ ರಸ್ತೆಯ ಶ್ರೀಕ್ಷೇತ್ರ ದ್ವಾರಪುರದ ಶ್ರೀ ಪರಮಾತ್ಮಾಶ್ರಮದಲ್ಲಿ ಗುರುವಾರ ನಡೆದ ಶ್ರೀಪರಮಾತ್ಮಾಜಿ ಮಹಾರಾಜರು ರಚಿಸಿದ ಆರು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಾವಕ್ಕನುಗುಣವಾಗಿ ಶಬ್ಧಗಳನ್ನು ಹೊಸೆಯುವುದು ಶ್ರೀಗಳ ವೈಶಿಷ್ಯವಾಗಿದೆ. ಆಶುಕವಿಯಾದ ಅವರು ನವ್ಯ ಮತ್ತು ಪ್ರಾಚ್ಯ ಎರಡೂ ವಿಧವಾಗಿ ಬರೆಯಬಲ್ಲರು. ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೀಗಳು ಧ್ರುವತಾರೆಯಾಗಿ ಮಿನುಗುವ ಕಾಲ ಸನ್ನಿಹಿತವಾಗುತ್ತಿದೆ. ಸಾಹಿತ್ಯ ವೇದಿಕೆಗಳು ಮತ್ತು ಸರಕಾರ ಇಂತಹ ಪ್ರತಿಭಾನ್ವಿತ ಕವಿಯನ್ನು ಗುರುತಿಸಿ ಮನ್ನಣೆಯನ್ನು ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀದತ್ತಚರಿತಂ (ಭಾಮಿನಿಷಟ್ಪದಿಯ ಮಹಾಕಾವ್ಯ), ದ್ವಾರಪುರಚರಿತಂ (ಭಾಮಿನಿಷಟ್ಪದಿಯ ಖಂಡಕಾವ್ಯ), ಚಲುವೆಗೆ (ಕವನ ಸಂಕಲನ), ಪರಭಾವ (ಕವನ ಸಂಕಲನ), ಓಡುತಿಹೆ (ಕವನ ಸಂಕಲನ), ಬೋಧ (ಆಧ್ಯಾತ್ಮಿಕ ನೀಳ್ಗವನ)
ಶ್ರೀಪರಮಾತ್ಮಾ ಮಹಾಸಂಸ್ಥಾನದ ಸಂಚಾಲಕ ರಾಮಕೃಷ್ಣ ಹೆಗಡೆ ಮಾತನಾಡಿ, ಶ್ರೀಪರಮಾತ್ಮಾಜಿ ಮಹಾರಾಜರು ಬಹುಮುಖ ಪ್ರತಿಭೆಯ ದಿವ್ಯಚೇತನರು. ಅವರು ವಿವಿಧ ವಿಷಯಕ್ಕೆ ಸಂಬಂಸಿದಂತೆ ಇದುವರೆಗೆ ಬರೆದ ಕೃತಿಗಳು ಸುಮಾರು ನೂರಕ್ಕೂ ಹೆಚ್ಚಾಗಿದೆ. ಅದರಲ್ಲಿ ಈಗ ಆರು ಕೃತಿಗಳನ್ನು ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಶ್ರೀಗಳ ಇದೂವರೆಗೆ ಸಾವಿರಾರು ವಚನಗಳು, ದಾಸರಪದಗಳು, ಸಂಸ್ಕೃತ ಶ್ಲೋಕಗಳು, ಕವನಗಳು, ಶೋಧ ಲೇಖನಗಳು, ಶಾಸ್ತ್ರಗ್ರಂಥಗಳು ಹಾಗೂ ಅನೇಕ ಅನುವಾದಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಇಂತಹ ಪ್ರತಿಭಾವಂತ ಲೇಖಕರು ಧಾರವಾಡ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಕೃತಿ ರಚನೆಕಾರರು ಹಾಗೂ ಶ್ರೀಕ್ಷೇತ್ರ ದ್ವಾರಪುರದ ಶ್ರೀ ಪರಮಾತ್ಮಾಶ್ರಮದ ಧರ್ಮಾಧ್ಯಕ್ಷರಾದ ಪರಮಾತ್ಮಾಜಿ ಮಹರಾಜ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಬಹುಶ್ರೀಮಂತವಾದುದ್ದು, ಈ ಲೋಕಕ್ಕೆ ನನ್ನ ಕಾಣಿಕೆ ನೀಡುವ ಬುದ್ಧಿಶಕ್ತಿಯನ್ನು ದಯಪಾಲಿಸಿ ತನ್ನ ಮಡಿಲಿನಲ್ಲಿ ಸ್ಥಳವನ್ನು ನೀಡಿ ಹರಸಿದ ಕನ್ನಡಾಂಬೆಗೆ ನಾನು ಚಿರರುಣಿ ಅಂತಾ ಹೇಳಿದ್ರು.
ಎಸ್.ಎಚ್.ಪಾಟೀಲ ಮಾತನಾಡಿದರು. ಅರ್ಚನಾದೇವಿ ನಿರೂಪಿಸಿದರು. ಗೊಲ್ಲಾಳಪ್ಪ ಬೆನಕನಹಳ್ಳಿ, ವಿಶಾಲ ಜಾಧವ ಸೇರಿದಂತೆ ಅನೇಕರು ಇದ್ದರು