ಕಾವೇರಿ ಹೋರಾಟ: ಶಿವಣ್ಣ, ಸುದೀಪ್, ದರ್ಶನ್ ಪ್ರತಿಕ್ರಿಯೆ

187

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯದಲ್ಲಿ ಮತ್ತೊಮ್ಮೆ ಹೋರಾಟದ ಕಹಳೆ ಊದುವ ಸಮಯ ಬಂದಿದೆ. ರಾಜ್ಯದಲ್ಲಿ ಬರಗಾಲವಿದ್ದರೂ ತಮಿಳುನಾಡಿಗೆ ನೀರು ಬಿಡು ಎಂದರೆ ಎಲ್ಲಿಂದ ಬಿಡುವುದು ಎಂದು ಹೇಳಲಾಗಿದೆ. ರೈತರ ಹೋರಾಟ ಮುಂದುವರೆದಿದೆ. ಇದೀಗ ಚಿತ್ರರಂಗದ ನಟರು ಒಬ್ಬೊಬ್ಬರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಟ ರಾಘವೇಂದ್ರ ರಾಜಕುಮಾರ್ ಹೋರಾಟಕ್ಕೆ ಸದಾ ಸಿದ್ಧವೆಂದಿದ್ದಾರೆ. ಶಿವಣ್ಣ ಎಕ್ಸ್ ನಲ್ಲಿ ವಿಡಿಯೋ ಶೇರ್ ಮಾಡಿದ್ದು, ರೈತ ದೇಶದ ಬೆನ್ನೆಲುಬು ಅಂತಾರೆ. ಆ ರೈತನ ಬೆನ್ನೆಲಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸಾರಿ ಮಳೆಯ ಅಭಾವವಿದ್ದು ರೈತ ಈಗಾಗ್ಲೇ ಸಂಕಷ್ಟದಲ್ಲಿದ್ದಾನೆ. ಎರಡು ರಾಜ್ಯದ ನಾಯಕರು ಹಾಗೂ ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕಾರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ ಎಂದಿದ್ದಾರೆ.

ಇನ್ನು ನಟ ಸುದೀಪ್ ಸಹ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ನೇಹಿತರೆ ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈ ಬಿಡುವುದಿಲ್ಲವೆಂದು ನಾನು ನಂಬಿದ್ದೇನೆ. ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ. ನೆಲ ಜಲ ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ ಎಂದಿದ್ದಾರೆ.

ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದು ನಟ ದರ್ಶನ್ ಎಕ್ಸ್ ನಲ್ಲಿ ಬರೆಯುವ ಮೂಲಕ ಬೆಂಬಲ ನೀಡಿದ್ದಾರೆ.

ಹೀಗೆ ಒಬ್ಬೊಬ್ಬರೆ ನಟರು ಕಾವೇರಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುವ ಮೂಲಕ ರಾಜ್ಯದ ರೈತರ ಪರ ನಾವು ಇದ್ದೇವೆ ಎನ್ನುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!