ಪ್ರಜಾಸ್ತ್ರ ಕ್ರೀಡಾ ಸುದ್ದಿ
ಭಾರತದಲ್ಲಿ ಕ್ರಿಕೆಟ್ ಅತಿ ದೊಡ್ಡ ಆಟ. ಇದನ್ನ ಅದೆಷ್ಟೋ ಜನರು ತಮ್ಮ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಾರೆ. ಮೊದ್ಲು ಕ್ರಿಕೆಟ್ ಅಂದ್ರೆ ಭಾರತ ಮತ್ತು ಎದುರಾಳಿ ರಾಷ್ಟ್ರಗಳ ತಂಡವಾಗಿತ್ತು. ಐಪಿಎಲ್ ಅನ್ನೋ ಟೂರ್ನಿ ಶುರುವಾದ್ಮೇಲೆ, ರಾಜ್ಯಗಳ ನಡುವೆ ವಾರ್ ಶುರುವಾಯ್ತು.
ತಮ್ಮ ತಮ್ಮ ರಾಜ್ಯಗಳ ತಂಡವನ್ನ ಬೆಂಬಲಿಸಿವುದರ ಜೊತೆಗೆ ತಮ್ಮ ನೆಚ್ಚಿನ ಆಟಗಾರ ಇರುವ ತಂಡವನ್ನ ಸಹ ಇತರೆ ರಾಜ್ಯಗಳ ಅಭಿಮಾನಿಗಳು ಸಹ ಸಪೋರ್ಟ್ ಮಾಡಲು ಶುರು ಮಾಡಿದ್ರು. ಹೀಗಾಗಿ ಜಿದ್ದಾಜಿದ್ದಿ ಶುರುವಾಯ್ತು. ಕೋಟಿ ಕೋಟಿ ಹಣ ಪಡೆದು ಆಡುವ ಆಟಗಾರರೇ ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ರೆ, ಫ್ಯಾನ್ಸ್ ಕೆಲವೊಮ್ಮೆ ಹುಚ್ಚರ ತರ ವರ್ತಸ್ತಾರೆ.
ಇಷ್ಟು ದಿನ ಪಂದ್ಯ ಸೋತರೆ ತಂಡದ ಕ್ಯಾಪ್ಟನ್, ಆಟಗಾರರು ಮೇಲೆ ಗರಂ ಆಗ್ತಿದ್ರು. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ರು. ಆದ್ರೆ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಗ್ರೇಟ್ ಇಂಡಿಯನ್ ಕ್ಯಾಪ್ಟನ್ ಆಗಿದ್ದ ಎಂ.ಎಸ್ ಧೋನಿಯ 6 ವರ್ಷದ ಮಗಳು ಜೀವಾಗೆ ರೇಪ್ ಹಾಗೂ ಹತ್ಯೆಯ ಬೆದರಿಕೆ ಹಾಕಲಾಗಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಲು ಧೋನಿ ಹಾಗೂ ಕೇದಾರ ಜಾದವ್ ಕಾರಣವೆಂದು ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಬೈಯಲಾಗಿದೆ. ಇದರ ಜೊತೆಗೆ ಇನ್ನೂ ಕೆಲವರು ಧೋನಿ ಮಗಳ ಕುರಿತು ಸಹ ಕೆಟ್ಟದಾಗಿ ಮಾತ್ನಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದನ್ನ ಅನೇಕರು ವಿರೋಧಿಸಿದ್ದು, ಭಾರತ ಯಾವ ಕಡೆ ಮುಖ ಮಾಡ್ತಿದೆ ಎಂದು ಪ್ರಶ್ನಿಸಿದ್ದಾರೆ. ಒಂದು ಕ್ರೀಡೆಯನ್ನ ಸ್ಪರ್ಧಾತ್ಮಕ ಮನೋಭಾವದಲ್ಲಿ ನೋಡದೆ, ಎದುರಾಳಿ ತಂಡವನ್ನ ವಿರೋಧಿಗಳು, ಶತ್ರುಗಳು ಅನ್ನೋ ತರ ನೋಡುತ್ತಾ ಕ್ರೌರ್ಯ, ದ್ವೇಷ ತುಂಬಿಕೊಳ್ತಿರುವುದು ಅಪಾಯದ ಸಂಗತಿ.
ವಿಶ್ವದ ಶ್ರೇಷ್ಠ ಕ್ರಿಕೆಟ್ ನಾಯಕರಲ್ಲಿ ಒಬ್ಬರಾಗಿ, ಯಾರೂ ಮಾಡದ ಸಾಧನೆ ಮಾಡಿ ಇಂಡಿಯನ್ ಕ್ರಿಕೆಟ್ ಟೀಂಗೆ ಬಹುದೊಡ್ಡ ಕೊಡುಗೆ ನೀಡಿದ ಧೋನಿ ಮಗಳಿಗೆ ಈ ರೀತಿ ಬೆದರಿಕೆ ಹಾಕಿರುವುದು ನಿಜಕ್ಕೂ ಅತ್ಯಂತ ನಾಚಿಕೆಗೇಡಿನ ಸಂಗತಿ.