ಪ್ರಜಾಸ್ತ್ರ ಸುದ್ದಿ
ಹಾವೇರಿ: ಜಿಲ್ಲೆಯ ಆಲದಕಟ್ಟೆ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಹಾಗೂ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬುಧವಾರ ಮುಂಜಾನೆ 4 ಗಂಟೆಯ ತನಕ ಬೆಂಕಿ ನಂದಿಸುವ ಕೆಲಸವನ್ನು ಅಗ್ನಿ ಶಾಮಕ ಸಿಬ್ಬಂದಿ ಮಾಡಿದ್ದಾರೆ.
ಈ ಘಟನೆ ಸಂಬಂಧ ಅಂಗಡಿ ಮಾಲೀಕ ಕುಮಾರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಶಾಸಕ ಬಸವರಾಜ್ ಬೊಮ್ಮಾಯಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಗೋದಾಮಿನ ಗೇಟ್ ವೆಲ್ಡಿಂಗ್ ಮಾಡುಸುತ್ತಿದ್ದಾಗ ಬೆಂಕಿ ಕಿಡಿ ತಾಗಿ ಅನಾಹುತವಾಗಿದೆ ಎಂದು ಹೇಳಲಾಗುತ್ತಿದೆ. ನಿಖರ ಕಾರಣದ ಕುರಿತು ತನಿಖೆ ನಡೆಯುತ್ತಿದೆ. ಒಂದೂವರೆ ಕೋಟಿ ಮೌಲ್ಯದ ಪಟಾಕಿ ಸುಟ್ಟು ಹೋಗಿವೆ. ದ್ಯಾಮಪ್ಪ ಓಲೇಕಾರ(25), ರಮೇಶ ಬಾರ್ಕಿ(28), ಶಿವಲಿಂಗ ಅಕ್ಕಿ(22) ಇನ್ನೊಬ್ಬನ ಗುರುತು ಪತ್ತೆಯಾಗಬೇಕಿದೆ. ಇವರೆಲ್ಲ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿಯವರಾಗಿದ್ದಾರೆ.