ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಮನೆಯಿಂದ ಹೊರಗೆ ಬರದಷ್ಟು ಮಳೆ ಬರುತ್ತಿದೆ. ಆದ್ರೆ, ಮನೆಯೊಳಗೆ ಇರಲು ಸಹ ಕಷ್ಟ. ಯಾಕಂದ್ರೆ, ಯಾವ ಟೈಂನಲ್ಲಿ ಮನೆಗಳು ಬೀಳುತ್ತವೆ ಅನ್ನೋ ಆತಂಕ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಊರುಗಳ ಜನರಲ್ಲಿ ಮೂಡಿದೆ. ಯಾಕಂದ್ರೆ ಮಹಾ ಮಳೆಯಿಂದಾಗಿ ಈಗಾಗ್ಲೇ 300 ಮನೆಗಳು ನೆಲಸಮವಾಗಿವೆ.
ಹುಬ್ಬಳ್ಳಿ ಗ್ರಾಮಿಣ ಪ್ರದೇಶದಲ್ಲಿ 114, ವರೂರಿನಲ್ಲಿ 8, ನೂಲ್ವಿಯಲ್ಲಿ 8, ಬ್ಯಾಹಟ್ಟಿಯಲ್ಲಿ 5, ಶಿರಗುಪ್ಪಿಯಲ್ಲಿ 6, ಅರಳಿಕಟ್ಟಿಯಲ್ಲಿ 17, ಬೆಳಗಲಿಯಲ್ಲಿ 5 ಹಾಗೂ ನವಲಗುಂದಲ್ಲಿ 80 ಮನೆಗಳು ಕುಸಿದಿವೆ. ಹೀಗೆಗಿ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಗಳು ಕುಸಿದು ಬೀಳುತ್ತಿವೆ. ಇದ್ರಿಂದಾಗಿ ಜನತೆ ಕಂಗಾಲಾಗಿದ್ದಾರೆ. ಜಾನುವಾರುಗಳ ಪಾಡು ಹೇಳ ತೀರದಾಗಿದೆ.
ಮಳೆ ಮಾಪನ ಕೇಂದ್ರವಾದ ಹುಬ್ಬಳ್ಳಿಯಲ್ಲಿ 30.8 ಮಿಲಿ ಮೀಟರ್, ಛಬ್ಬಿಯಲ್ಲಿ 45.2, ಬ್ಯಾಹಟ್ಟಿಯಲ್ಲಿ 28.4, ಶಿರಗುಪ್ಪಿಯಲ್ಲಿ 27.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದ್ರಿಂದಾಗಿ ಎಲ್ಲಿ ನೋಡಿದ್ರೂ ನೀರು ನೀರು. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ. ತಗ್ಗು ಪ್ರದೇಶಗಳಲ್ಲಿನ ಮನೆ, ದೇವಸ್ಥಾನ ಸೇರಿದಂತೆ ಎಲ್ಲ ಕಡೆ ನೀರು ನುಗ್ಗುತ್ತಿವೆ. ಮನೆಗೆ ನುಗ್ಗಿದ ನೀರು ಹೊರ ಹಾಕಲು ಜನರು ಪರದಾಡ್ತಿದ್ದಾರೆ. ಇದು ಸಾಲದು ಅಂತಾ ನೀರಿನ ಜೊತೆ ಕಸಕಡ್ಡಿಗಳು, ಹಾವು ಸೇರಿದಂತೆ ವಿಷಜಂತುಗಳು ಬರುತ್ತವೆ. ಇದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.