ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಿತ್ರರಂಗದವರು ರಾಜಕೀಯ ಕ್ಷೇತ್ರಕ್ಕೆ ಬರುವುದು ಹೊಸದಲ್ಲ. ಪಕ್ಕದ ತಮಿಳುನಾಡಿನಲ್ಲಿ ಮುಖ್ಯಮಂತ್ರಿಗಳೇ ಆಗಿದ್ದಾರೆ. ಕರ್ನಾಟಕದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಚುನಾವಣೆ ಹತ್ತಿರ ಬಂದಾಗ ನಟ, ನಟಿಯರು ರಾಜಕೀಯಕ್ಕೆ ಬರುತ್ತಾರೆ ಅನ್ನೋ ಚರ್ಚೆ ಕೇಳಿ ಬರುತ್ತೆ. ಅದರಂತೆ ನಟ ಕಿಚ್ಚ ಸುದೀಪ್ ಅವರ ಹೆಸರು ಚಾಲ್ತಿಯಲ್ಲಿದೆ.
ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಅವರು, ನನಗೆ ರಾಜಕೀಯಕ್ಕೆ ಬರುವುದಕ್ಕೆ ಆಹ್ವಾನ ಬಂದಿರುವುದು ನಿಜ. ಇಲ್ಲವೆಂದು ಹೇಳುವುದಿಲ್ಲ. ನಾನು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದೇನೆ. ಅದು ಬಸವರಾಜ ಬೊಮ್ಮಾಯಿ ಮಾಮಾ ಆಗಿರಬಹುದು, ಸ್ನೇಹಿತೆ ರಮ್ಯಾ ಇರಬಹುದು, ಡಿ.ಕೆ ಶಿವಕುಮಾರ್, ಡಾ.ಕೆ ಸುಧಾಕರ್ ಆಗಿರಬಹುದು. ಎರಡೂ ಕಡೆ ಆಪ್ತರಿದ್ದಾರೆ. ಎಮೋಷನಲ್ ಸಂಬಂಧವಿದೆ. ಆದರೆ, ಅಭಿಮಾನಿಗಳ ಒಂದು ಪಕ್ಷವಿದೆ. ಅವರು ಏನು ನಿರೀಕ್ಷೆ ಮಾಡುತ್ತಿದ್ದಾರೆ ಅನ್ನೋದು ಮುಖ್ಯ.
ಒಳ್ಳೆಯ ಕೆಲಸ ಮಾಡಲು ಅಧಿಕಾರವೇ ಬೇಕೆಂತ ಏನಿಲ್ಲ. ನೋಡೋಣ. ನಾನು ಇನ್ನು ರಾಜಕೀಯ ಸೇರುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದಿದ್ದಾರೆ. ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಬದಲು ಅಭ್ಯರ್ಥಿಗಳನ್ನು ಬೆಂಬಲಿಸುವ ನನ್ನನ್ನು ಆಯ್ಕೆ ಮಾಡಬಹುದು ಅನ್ನೋ ಸುಳಿವು ನೀಡಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರವಾಗಿ ನಟರಾದ ದರ್ಶನ್, ಯಶ್ ಪ್ರಚಾರ ನಡೆಸಿದ್ದರು.