ಸಕಲೇಶಪುರ: ಸುತ್ತಾಡಿಕೊಂಡು ಬರುತ್ತೇವೆಂದು ಸಂಜೆ ಬೈಕ್ ಏರಿ ಹೋದ ನವದಂಪತಿ ಶವವಾಗಿ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ. 27 ವರ್ಷದ ಅರ್ಥೇಶ ಹಾಗೂ 23 ವರ್ಷದ ಕೃತಿಕಾ ಸಾವನ್ನಪ್ಪಿದ್ದ ನವದಂಪತಿ.
ಬೇಲೂರು ತಾಲೂಕಿನ ಮುರಹಳ್ಳಿಯ ಅರ್ಥೇಶ ಹಾಗೂ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದ ಕೃತಿಕಾ ಮದ್ವೆ ಕಳೆದ 2 ತಿಂಗಳ ಹಿಂದೆಯಷ್ಟೇ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅರ್ಥೇಶ, ಲಾಕ್ ಡೌನ್ ನಿಂದಾಗಿ ಊರಿಗೆ ಬಂದಿದ್ದ. ಬುಧವಾರ ಪತ್ನಿಯ ತವರು ಮನೆ ಹೆನ್ನಲಿಗೆ ಬಂದಿದ್ದಾನೆ.
ಹೀಗೆ ಬಂದ ಅರ್ಥೇಶ ಗುರುವಾರ ಸಂಜೆ ಪತ್ನಿಯ ಜೊತೆ ಸುತ್ತಾಡಿಕೊಂಡು ಬರುತ್ತೇವೆ ಎಂದು ಬೈಕ್ ಏರಿ ಹೋಗಿದ್ದಾರೆ. ತುಂಬಾ ಸಮಯವಾದ್ಮೇಲೂ ಮನೆಗೆ ವಾಪಸ್ ಬಂದಿಲ್ಲ. ಆಗ ಇಬ್ಬರ ಫೋನ್ ಗೆ ಕಾಲ್ ಮಾಡಿದಾಗ ಎರಡೂ ಮೊಬೈಲ್ ಸ್ವಿಚ್ ಆಫ್ ಬಂದಿವೆ. ಹೀಗಾಗಿ ಮನೆಯವರು ಗಾಬರಿಯಿಂದ ಎಲ್ಲೆಡೆ ಹುಡುಕಲು ಶುರು ಮಾಡಿದ್ದಾರೆ. ಬಳಿಕ ಹೇಮಾವತಿ ನದಿ ಬಳಿ ಬೈಕ್ ಪತ್ತೆಯಾಗಿದೆ.
ನದಿಯಲ್ಲಿ ಮೀನುಗಾರರು ಹಾಕಿದ್ದ ಬಲೆಯಲ್ಲಿ ಕೃತಿಕಾ ಶವ ಸಿಕ್ಕಿದೆ. ನಂತರ ಅರ್ಥೇಶ ಮೃತದೇಹ ಸಿಕ್ಕಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆದ್ರೂ ನವದಂಪತಿ ಹೇಗೆ ಸಾವನ್ನಪ್ಪಿತು ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.