ದೇಶದ ಪ್ರಥಮ ಮಹಿಳಾ ಹಣಕಾಸು ಸಚಿವರಾಗಿ ಪೂರ್ಣಪ್ರಮಾಣದ ಕೇಂದ್ರ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್, ಇಂದು ಹಳೆ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆ. ಈ ಹಿಂದೆ ಬಜೆಟ್ ಮಂಡಿಸಲು ವಿತ್ ಮಂತ್ರಿಗಳು ಕಪ್ಪು ಅಥವಾ ಕಂದು ಬಣ್ಣದ ಬ್ರಿಫ್ ಕೇಸ್ ನೊಂದಿಗೆ ಸಂಸತ್ ಆಗಮಿಸಿ ಅದರಲ್ಲಿದ್ದ ಬಜೆಟ್ ದಾಖಲೆಗಳನ್ನು ಮಂಡಿಸಿರುವುದು ವಾಡಿಕೆಯಾಗಿತ್ತು. ಆದರೆ ನಿರ್ಮಲಾ ಅವರು ಬ್ರಿಫ್ ಕೇಸ್ ಬದಲಿಗೆ ಕೆಂಪು ರಿಬ್ಬನ್ ಸುತ್ತಿದ್ದ ಚೀಲದಲ್ಲಿನ ದಾಖಲೆಗಳೊಂದಿಗೆ ಸಂಸತ್ ಭವನ ಪ್ರವೇಶ ಮಾಡಿ, ಎಲ್ಲರ ಗಮನ ಸೆಳೆದ್ರು.
ರೆಡ್ ಪ್ಯಾಕೆಟ್ ಮೇಲೆ ರಾಷ್ಟ್ರೀಯ ಲಾಂಛನವು ಎದ್ದು ಕಾಣುತ್ತಿತ್ತು. ಕೆಂಪು ಬಣ್ಣದ ಸೀರೆ ಧರಿಸಿದ್ದ ನಿರ್ಮಲಾ ಅವರ ಕೈಯಲ್ಲಿ ಬಜೆಟ್ ಮಂಡನೆಯ ದಾಖಲೆ ಪತ್ರಗಳನ್ನು ನವೀರಾದ ಕೆಂಪು ಬಟ್ಟೆಯಿಂದ ಸುತ್ತಿ ಅದಕ್ಕೆ ಕೆಂಪು ರಿಬ್ಬನ್ ಕಟ್ಟಲಾಗಿತ್ತು.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ ಠಾಕೂರ್, ಹಣಕಾಸು ಕಾರ್ಯದರ್ಶಿ ಎಸ್.ಸಿ ಗರ್ಗ್, ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ಇತರ ಅಧಿಕಾರಿಗಳು ನಿರ್ಮಲಾ ಸೀತಾರಾಮನ್ ಅವರಿಗೆ ಸಾಥ್ ನೀಡಿದರು.
ಬ್ರಿಫ್ ಕೇಸ್ ವಿದೇಶಿ ಸಂಸ್ಕೃತಿ. ಹೀಗಾಗಿ ಈ ಬಾರಿ ಆ ಸಂಪ್ರದಾಯ ಮುರಿದು ದೇಶೀಯ ಶೈಲಿಯ ಚೀಲದಲ್ಲಿ ಬಜೆಟ್ ದಾಖಲೆಗಳನ್ನು ಒಯ್ಯಲಾಗಿದೆ. ಇದು ಬಜೆಟ್ ಬುಕ್ ಅಲ್ಲ. ಇದು ಲೆಡ್ಜರ್ ಎಂದು ಹಣಕಾಸು ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಬಜೆಟ್ ಮುಖ್ಯಾಂಶಗಳು:
ಜನಧನ್ ಖಾತೆಗಳಿಂದ 5 ಸಾವಿರ ರೂ. ಒಡಿ ನೀಡಲು ನಿರ್ಧಾರ
‘ನಾರಿ ಟು ನಾರಾಯಣಿ’ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಪಾಲುದಾರಿಕೆಗೆ ಹೆಚ್ಚಿನ ಆದ್ಯತೆ.
ರಾಷ್ಟ್ರೀಕೃತ ಬ್ಯಾಂಕ್ಗಳ ಏಕೀಕರಣಕ್ಕೆ ಒತ್ತು. ಬ್ಯಾಂಕ್ಗಳ 1 ಲಕ್ಷ ಕೋಟಿ ರೂ. ಅನುತ್ಪಾದಕ ಆಸ್ತಿ ವಶಕ್ಕೆ. ಸಾರ್ವಜನಿಕ ರಂಗದ ಬ್ಯಾಂಕ್ಗಳಿಗೆ 70,000 ಕೋಟಿ ರೂ. ಹಣಕಾಸು ನೆರವು
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮುಂದಿನ 5 ವರ್ಷಗಳಿಗೆ 100 ಲಕ್ಷ ಕೋಟಿ ರೂ.ಅನುದಾನ
ಗೃಹ ನಿರ್ಮಾಣ ಮೂಲ ಸೌಕರ್ಯಕ್ಕೆ ಮುಂದಿನ 5 ವರ್ಷಗಳಿಗೆ 100 ಲಕ್ಷ ಕೋಟಿ ರೂ.
60 ವರ್ಷ ಮೇಲ್ಪಟ್ಟರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ
60 ಕೋಟಿ ಎಲ್ಇಡಿ ಬಲ್ಬ್ಗಳನ್ನು ಬಿಪಿಎಲ್ ಕುಟುಂಬಗಳಿಗೆ ವಿತರಿಸಲಾಗುವುದು.
ಉಜ್ವಲ ಯೋಜನೆ ಅಡಿ 7.5 ಕೋಟಿ ಕುಟುಂಬಕ್ಕೆ ಎಲ್ಪಿಜಿ ಗ್ಯಾಸ್ ಸಂಪರ್ಕ
ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ಸ್ಥಾಪನೆ ನಿರ್ಧಾರ. 10 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ
ಸ್ಟಾರ್ಟ್ಆಯಪ್ ಯೋಜನೆಗಳ ಮೂಲಕ ಎಸ್ಸಿ/ಎಸ್ಟಿಯವರಿಗೆ ಮತ್ತು ಮಹಿಳೆಯರಿಗೆ ಆರ್ಥಿಕ ಸಹಾಯ.
ಶೂನ್ಯ ಬಂಡವಾಳದ ಮೂಲಕ ಕೃಷಿ ಕ್ಷೇತ್ರ ಬಲಪಡಿಸಲಾಗುವುದು
ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಅನ್ನದಾತನನ್ನು ಶಕ್ತಿಶಾಲಿ ಮಾಡಲಾಗುವುದು. ಕೃಷಿಕರಿಗೆ ಸೂಕ್ತ ಬೆಲೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು.
ಸ್ವಚ್ಛ ಭಾರತ ಯೋಜನೆ ಅಡಿ 9.5 ಕೋಟಿ ಶೌಚಾಲಯ ನಿರ್ಮಾಣ
ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಅಡಿ 5 ವರ್ಷಗಳಲ್ಲಿ 1,25,000 ಕಿ.ಮೀ. ರಸ್ತೆ ಅಭಿವೃದ್ದಿ ಮಾಡಲಾಗುವುದು.
ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಯೋಜನೆ ಜಾರಿ
ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ. 3ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚ ಮುಕ್ತ
ನಗರ-ಗ್ರಾಮೀಣ ಪ್ರದೇಶಗಳಲ್ಲಿ ಏಕರೀತಿಯ ಜೀವನಕ್ಕೆ ಒತ್ತು
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 81 ಲಕ್ಷ ಮನೆ ನಿರ್ಮಾಣ. 26 ಲಕ್ಷ ಮನೆಗಳು ಈಗಾಗಲೇ ನಿರ್ಮಾಣ
ಭಾರತದ 3 ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ. ಐಐಟಿ, ಐಐಎಂ, ಐಐಎಸ್ಸಿಗೆ 400 ಕೋಟಿ ರೂ. ಅನುದಾನ.
ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ 1.95 ಕೋಟಿ ಮನೆ ನಿರ್ಮಾಣ ಮಾಡಲಾಗುವುದು
ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ. ವಿದೇಶಗಳ ಮಾದರಿಯಲ್ಲಿ ಬಾಡಿಗೆ ಮನೆ ವಾಸಕ್ಕೆ ಆದ್ಯತೆ. ಇದಕ್ಕಾಗಿ ಸರ್ಚಾರ್ಜ್ ತೆರಿಗೆಯನ್ನು ಮುಕ್ತಗೊಳಿಸಲಾಗುವುದು
ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ಎಫ್ಡಿಐ ಹೂಡಿಕೆಗೆ ಅನುಮತಿ
ಭಾರತಕ್ಕೆ ಎಫ್ಡಿಐ ಹೂಡಿಕೆದಾರರನ್ನು ಆಕರ್ಷಿಸಲು ನೂತನ ಯೋಜನೆ ರೂಪಿಸಲಾಗುವುದು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 24 ಸಾವಿರ ಕೋಟಿ ಅನುದಾನ
ಭಾರತದಲ್ಲಿ ಎನ್ಆರ್ಐ ಹೂಡಿಕೆ ಹೆಚ್ಚಳ. ಎನ್ಆರ್ಐ ಆಕರ್ಷಿಸಲು ಹಲವು ಯೋಜನೆ
ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ.
ಶೇ.97ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ
3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ. ಇದಕ್ಕಾಗಿ ಕರ್ಮಯೋಗಿ ಸಮ್ಮಾನ್ ಯೋಜನೆ ಜಾರಿಗೆ ತರಲಾಗುವುದು.
ಒಂದು ದೇಶ, ಒಂದು ಗ್ರೀಡ್ ಯೋಜನೆ ಮೂಲಕ ಎಲ್ಲ ರಾಜ್ಯಗಳಿಗೂ ಸಮಾನ ವಿದ್ಯುತ್ ಹಂಚಿಕೆ.
ಸದೃಢ ದೇಶಕ್ಕಾಗಿ ಸದೃಢ ನಾಗರೀಕರು ನಮ್ಮ ಸರಕಾರದ ಧ್ಯೇಯ. ಭಾರತದ ಆರ್ಥಿಕತೆ ಶರವೇಗದಲ್ಲಿ ಸಾಗುತ್ತಿದ್ದು,ಸರಕಾರಿ ಪ್ರಕ್ರಿಯೆಗಳನ್ನು ಸರಳೀಕರಿಸುತ್ತಿದ್ದು, ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ
ಭಾರತ ಇದೇ ವರ್ಷ 3 ಟ್ರಿಲಿಯನ್ ದೇಶವಾಗಲಿದೆ.5 ಟ್ರಿಲಿಯನ್ ಆರ್ಥಿಕತೆ ಯೋಜನೆ ರೂಪಿಸಲಾಗುತ್ತಿದೆ.
ಮುದ್ರಾ ಯೋಜನೆ ಮೂಲಕ ಜನಸಾಮಾನ್ಯರಲ್ಲ್ಲಿ ಬದಲಾವಣೆಯಾಗಿದೆ. ಗಗನ ಯಾನ, ಚಂದ್ರಯಾನ, ಆಯಷ್ಮಾನ್ ಆರೋಗ್ಯ ಯೋಜನೆ ಮೂಲಕ ಭಾರತ ಪ್ರಕಾಶಿಸುತ್ತಿದೆ.
ಭಾರತ ವಿಶ್ವದಲ್ಲಿ ಆರು ಆರ್ಥಿಕ ರಾಷ್ಟ್ರವಾಗಿದೆ.
ಎಲೆಕ್ಟ್ರಿಕ್ ವಾಹನಗಳ ತಯಾರಿಕೆ. ಬಳಕೆಗೆ ಎಲ್ಲ ರೀತಿಯ ಸಹಕಾರ.
300 ಕಿ.ಮೀ. ಮೆಟ್ರೊ ರೈಲು ಮಾರ್ಗಕ್ಕೆ ಅನುಮೋದನೆ
ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ
ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು.
ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ.
ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ, ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ.
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ 2019-20 ರಿಂದ 201-22ರ ಅವಧಿಯಲ್ಲಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಈ ವಿಷಯ ತಿಳಿಸಿದ ನಿರ್ಮಲಾ ಸೀತಾರಾಮನ್, ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ, ವಿದ್ಯುತ್, ಎಲ್ ಪಿಜಿ ಸೌಕರ್ಯ ಕಲ್ಪಿಸಲಾಗುವುದು, ಮನೆಗಳ ನಿರ್ಮಾಣದ ಅವಧಿಯನ್ನು 314ದಿನಗಳಿಂದ 114 ದಿನಗಳಿಗೆ ಇಳಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾ ಮಾಡಲಾಗುವುದು, ಈಗಾಗಲೇ 26 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ ಒದಗಿಸಲಾಗುವುದು, ನೂತನ ತಂತ್ರಜ್ಞಾನದಿಂದ ಆಧುನಿಕ ಮನೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
2022ರೊಳಗೆ ಎಲ್ಲರಿಗೂ ಪ್ರತಿಯೊಬ್ಬರಿಗೂ ಮನೆ ಒದಗಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು
ಮಹಿಳಾ ಸಂಘಗಳ ಸದಸ್ಯರಿಗೆ ಬಂಪರ್
ದೇಶದ ಎಲ್ಲಾ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿ ಸಾಲ ಸೌಲಭ್ಯ ಸಿಗಲಿದ್ದು, ಜನಧನ್ ಖಾತೆ ಹೊಂದಿರುವ ಮಹಿಳಾ ಸಂಘದ ಸದಸ್ಯರಿಗೆ 5000 ರೂಪಾಯಿ ಸಾಲ ನೀಡಲಾಗುತ್ತದೆ. ಅಲ್ಲದೆ ‘ಮುದ್ರಾ’ ಯೋಜನೆಯಡಿ ಮಹಿಳಾ ಸಂಘಗಳಿಗೆ 1 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ ಸಾಲ ಸೌಲಭ್ಯ ಸಿಗಲಿದೆ.
ಮಾಧ್ಯಮ-ವಾಯುಯಾನ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ
ಮಾಧ್ಯಮ ಮತ್ತು ವಾಯುಯಾನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಇಂದು ಬಜೆಟ್ ಮಂಡಿಸಿದ ಸಚಿವೆ, ವಿಮಾ ಮಧ್ಯವರ್ತಿಗಳಿಗೆ ಶೇಕಡಾ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲಾಗುವುದು ಎಂದರು.
2018ರಲ್ಲಿ ಜಾಗತಿಕ ವಿದೇಶಿ ನೇರ ಹೂಡಿಕೆ ಹರಿವು ಶೇಕಡಾ 13ರಷ್ಟು ಕಡಿಮೆಯಾಗಿ 1.3 ಟ್ರಿಲಿಯನ್ ಡಾಲರ್ ಗೆ ತಲುಪಿತ್ತು. ಅದಕ್ಕಿಂತ ಹಿಂದಿನ ವರ್ಷ ವಿದೇಶಿ ನೇರ ಹೂಡಿಕೆ ಹರಿವು ಮೊತ್ತ 1.5 ಟ್ರಿಲಿಯನ್ ನಷ್ಟಾಗಿತ್ತು. ಆದರೂ ಭಾರತದ ಎಫ್ ಡಿಐ 2018-19ರಲ್ಲಿ ಬಲಿಷ್ಠವಾಗಿ ಉಳಿದಿದ್ದು 54.2 ಬಿಲಿಯನ್ ಡಾಲರ್ ನಲ್ಲಿ ಉಳಿದುಕೊಂಡಿದೆ, ಕಳೆದ ವರ್ಷಕ್ಕಿಂತ ಶೇಕಡಾ 6ಕ್ಕಿಂತ ಹೆಚ್ಚಾಗಿದೆ ಎಂದರು.
ವಿಮಾನಯಾನ, ಮಾಧ್ಯಮ, ಆನಿಮೇಷನ್ ಎವಿಜಿಸಿ ಮತ್ತು ವಿಮಾ ವಲಯಗಳಲ್ಲಿ ಷೇರುದಾರರ ಜೊತೆ ಸಮಾಲೋಚನೆ ನಡೆಸಿ ಮತ್ತಷ್ಟು ಎಫ್ ಡಿಐ ತೆರೆಯಲು ಸರ್ಕಾರ ಸಲಹೆಗಳನ್ನು ಆಹ್ವಾನಿಸಲಿದೆ. ವಿಮಾ ಮಧ್ಯವರ್ತಿಗಳಿಗೆ ಶೇಕಡಾ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಸಿಂಗಲ್ ಬ್ರಾಂಡ್ ರಿಟೈಲ್ ವಲಯದಲ್ಲಿ ಹೂಡಿಕೆದಾರರನ್ನು ಉತ್ತೇಜಿಸಲು ಎಫ್ ಡಿಐಗೆ ಸ್ಥಳೀಯ ಮೂಲ ನಿಯಮಗಳನ್ನು ಸರಳಗೊಳಿಸಲಾಗುವುದು.
ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ನಾಯಕರುಗಳು ಮತ್ತು ಕಾರ್ಪೊರೇಟ್ ಸ್ವಾಯತ್ತತೆ ಮತ್ತು ಸಾಹಸೋದ್ಯಮ ನಿಧಿಗಳನ್ನು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಭೂತಸೌಕರ್ಯ ನಿಧಿಯಡಿ ತರಲು ವಾರ್ಷಿಕ ಜಾಗತಿಕ ಸಭೆ ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಅನಿವಾಸಿ ಭಾರತೀಯರ ಖಾತೆಗಳನ್ನು ವಿದೇಶಿ ಹೂಡಿಕೆ ಖಾತೆಗಳೊಂದಿಗೆ ಒಟ್ಟು ಸೇರಿಸಿ ದೇಶದಲ್ಲಿ ಎನ್ ಆರ್ ಐ ಹೂಡಿಕೆ ಸರಳೀಕೃತಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತೀಯ ಷೇರುಗಳು ಅನಿವಾಸಿ ಭಾರತೀಯರಿಗೆ ಸುಲಭವಾಗಿ ಲಭ್ಯವಾಗಲು ಎನ್ಆರ್ ಐ ಖಾತೆ ಹೂಡಿಕೆ ಮಾರ್ಗವನ್ನು ವಿದೇಶಿ ಖಾತೆ ಹೂಡಿಕೆ ಜೊತೆ ಸೇರಿಸಲಾಗುವುದು ಎಂದು ಇಂದು ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಇನ್ನು ಮುಂದೆ ಅನಿವಾಸಿ ಭಾರತೀಯರು 180 ದಿನಗಳ ಕಾಲ ಭಾರತೀಯ ಪಾಸ್ ಪೋರ್ಟ್ ಪಡೆಯಲು ಕಾಯಬೇಕಾಗಿಲ್ಲ. ಆಧಾರ್ ಸಂಖ್ಯೆ ಮೂಲಕ ಭಾರತೀಯ ಪಾಸ್ ಪೋರ್ಟ್ ಒದಗಿಸುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಕೆ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದ್ದು, ಬಂಗಾರದ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್ನಲ್ಲಿ ಬರೆ ನೀಡಿದ್ದಾರೆ. 127 ನಿಮಿಷಗಳ ಕಾಲ ನಿರರ್ಗಳವಾಗಿ ಬಜೆಟ್ ಭಾಷಣ ಮಂಡಿಸಿದ ನಿರ್ಮಲಾ ಸೀತಾರಾಮನ್ ಚಾಣಕ್ಯ ನೀತಿ, ಉರ್ದು ಶಾಯರಿ, ತಮಿಳಿನ ತಿರುವಳ್ಳುವರ್ ಹೇಳಿಕೆ, ಕಥೆ, ಸ್ವಾಮಿ ವಿವೇಕಾನಂದ ಹೇಳಿಕೆ, ಉದ್ಯಮಿಗಳ ಕೋಟ್ಗಳನ್ನು ಪ್ರಸ್ತಾವಿಸಿದರು.
ಆದಾಯ ತೆರಿಗೆ ಪಾವತಿಸಲು ಪಾನ್ ಕಾರ್ಡ್ ಕಡ್ಡಾಯ ನಮೂದಿಸಬೇಕಾದ ಅಗತ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆದರೆ ಚಿನ್ನ, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿದ್ದು, ಚಿನ್ನದ ಮೇಲಿನ ಆಮದು ಸುಂಕ ಕೂಡ ಹೆಚ್ಚು ಮಾಡಲಾಗಿದೆ. ಮೊದಲ ಬಾರಿಗೆ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಗಳಿಸಲಾದ ಅಭೂತಪೂರ್ವ ಯಶಸ್ಸು ಪ್ರಸ್ತಾವಿಸಿದರು.
ನವಭಾರತ ನಿರ್ಮಾಣಕ್ಕೆ ಇಡೀ ದೇಶ ಬೆಂಬಲಕ್ಕೆ ನಿಂತಿದೆ. ಚಾಣಕ್ಯ ನೀತಿಯನ್ನು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಿದರು. ಭರವಸೆ ಇದ್ದರೆ ಮಾರ್ಗ ಇದ್ದೇ ಇರುತ್ತದೆ ಎಂದು ನಿರ್ಮಲಾ ತಿಳಿಸಿದರು. ತೆರಿಗೆ ವಿಷಯವನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ತೆರಿಗೆದಾರರಿಗೆ ಧನ್ಯವಾದ ಅರ್ಪಿಸಿದರು.
ಪಾನ್ ಕಾರ್ಡ್-ಆಧಾರ್ ಕಾರ್ಡ್ ಜೋಡಣೆಗೆ ತುಸು ವಿನಾಯಿತಿ ನೀಡಲಾಗಿದೆ. ತೆರಿಗೆ ಪಾವತಿ ಮಾಡುವವರು ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ ಆಧಾರ್ ಸಂಖ್ಯೆ ನಮೂದಿಸಿ ಮುಂದುವರಿಯಬಹುದು ಎಂದು ನಿರ್ಮಲಾ ತಿಳಿಸಿದರು.
ಸ್ವಚ್ಛ ಭಾರತ ಅಭಿಯಾನ
ಸ್ವಚ್ಛ ಭಾರತ ಅಭಿಯಾನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. 2014ರಲ್ಲಿ ಹೊಸದಿಲ್ಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಇಡೀ ದೇಶಕ್ಕೆ ಮೋದಿ ಕರೆ ನೀಡಿದರು.
ನಿಮ್ಮ ಪ್ರತಿ ಬೀದಿ, ಬಡಾವಣೆ ಗ್ರಾಮ, ನಗರ, ರಾಜ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಮೋದಿ ಕರೆ ನೀಡಿದರು. ಅದಕ್ಕಿಂತಲೂ ಮುಖ್ಯವಾಗಿ ಗ್ರಾಮಗಳು ಬಯಲು ಶೌಚ ಮುಕ್ತವಾಗಬೇಕು ಎಂಬುದು ಮೋದಿ ಅವರ ಮುಖ್ಯ ಉದ್ದೇಶವಾಗಿತ್ತು. ಅದರಂತೆ ಮೋದಿ ಸರಕಾರ ಮೊದಲ ಅವಧಿಯಲ್ಲಿ ಬಹುತೇಕ ಯಶಸ್ಸು ಸಾಧಿಸಿದೆ. 2014ರಿಂದ ಇದುವರೆಗೆ 9.5 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಿದ್ದಾರೆ. ಶೇಕಡ 95ರಷ್ಟು ಗ್ರಾಮಗಳು ಈಗಾಗಲೇ ಬಯಲು ಶೌಚ ಮುಕ್ತವಾಗಿವೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದ ವೇಳೆ ಅಂದರೆ ಅಕ್ಟೋಬರ್ 2ರೊಳಗೆ ಶೇಕಡ 100ರಷ್ಟು ಗುರಿ ಸಾಧಿಸುವ ಇರಾದೆ ಇದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಯಾವುದು ಅಗ್ಗ?
ಎಲೆಕ್ಟ್ರಿಕ್ ವಾಹನ
ಡಯಾಲಿಸಿಸ್ ಯಂತ್ರೋಪಕರಣ
ಶಸ್ತ್ರ ಚಿಕಿತ್ಸೆ ಉಪಕರಣ
ಎಲೆಕ್ಟ್ರಿಕ್ ಸಾಮಾನು
ಆನ್ಲೈನ್ ವಹಿವಾಟು
ಫಾಮ್ ಆಯಿಲ್
ಫ್ಯಾಂಟಿ ಆಯಿಲ್
ಪೇಪರ್ಸ್
ಯಾವುದು ದುಬಾರಿ?
ಪೆಟ್ರೋಲ್, ಡಿಸೇಲ್
ಚಿನ್ನ, ಬೆಲೆಬಾಳುವ ಲೋಹ
ಪಿವಿಸಿ ಪೈಪ್
ತಂಬಾಕು ಉತ್ಪನ್ನ
ಮಾರ್ಬಲ್
ಸಿಸಿಟಿವಿ ಕ್ಯಾಮೆರಾ
ಡಿವಿಡಿ
ಆಟೋ ಬಿಡಿಭಾಗ
ಒಎಫ್ಸಿ ಕೇಬಲ್
ರಬ್ಬರ್
ಗೋಡಂಬಿ
ಪ್ಲಾಸ್ಟಿಕ್
ಎಸಿ
ಇದು ಮೊದಲ ಮಹಿಳಾ ಹಣಕಾಸು ಸಚಿವೆ ಮಂಡಿಸಿರುವ ಮೊದಲ ಬಜೆಟ್ ನ ಕಂಪ್ಲೀಟ್ ಸ್ಟೋರಿ..