ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಂಗಳವಾರ ರಾತ್ರಿ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೆಲ ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ ಮಾಜಿ ಡಿಸಿಎಂ ಆರ್.ಅಶೋಕ ಹಾಗೂ ಸಚಿವ ವಿ.ಸೋಮಣ್ಣಗೆ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ.
ಬೆಂಗಳೂರಿನ ಪದ್ಮನಾಭನಗರದಿಂದ ಸ್ಪರ್ಧಿಸುತ್ತ ಬಂದಿರುವ ಆರ್.ಅಶೋಕಗೆ ಈ ಬಾರಿಗೆ ಕನಕಪುರದಿಂದ ಟಿಕೆಟ್ ನೀಡಲಾಗಿದೆ. 6 ಬಾರಿ ಶಾಸಕರಾಗಿರುವ ಅಶೋಕಗೆ ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಯಾಕಂದರೆ ಕನಕಪುರದಲ್ಲಿ ಕಾಂಗ್ರೆಸ್ ನಿಂದ ಇರುವುದು ಡಿ.ಕೆ ಶಿವಕುಮಾರ್. ಇದು ಡಿಕೆಶಿ ತವರು ಕ್ಷೇತ್ರ. ಇಲ್ಲಿ ಗೆಲ್ಲಬೇಕು ಅಂದರೆ ಆರ್.ಅಶೋಕ ಎಷ್ಟೊಂದು ಕಸರತ್ತು ಮಾಡಬೇಕು ಅನ್ನೋದು ಅವರಿಗೆ ಗೊತ್ತು. ಕನಕಪುರದಿಂದ ಟಿಕೆಟ್ ಘೋಷಣೆಯಾಗಿದ್ದಕ್ಕೆ ಅಮಿತ್ ಶಾ ನನಗೆ ಈ ಬಗ್ಗೆ ಏನೂ ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಕಡೆ ವರುಣಾದಿಂದ ಸಚಿವ ವಿ.ಸೋಮಣ್ಣಗೆ ಟಿಕೆಟ್ ಘೋಷಿಸಲಾಗಿದೆ. ಇಲ್ಲಿ ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯ ಕಣದಲ್ಲಿ ಇದ್ದಾರೆ. ವರುಣಾ ಸಿದ್ದರಾಮಯ್ಯಗೆ ತವರು ಕ್ಷೇತ್ರ. ಕಳೆದ ಬಾರಿ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಈ ಬಾರಿಗೆ ಅವರೆ ಕಣದಲ್ಲಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರದಿಂದ ಸ್ಪರ್ಧಿಸಬೇಕಿದ್ದ ವಿ.ಸೋಮಣ್ಣಗೆ ಢವಢವ ಶುರುವಾಗಿದೆ. ಕಾಂಗ್ರೆಸ್ ನ ಇಬ್ಬರು ಘಟಾನುಘಟಿ ನಾಯಕರ ಎದುರು ಬಿಜೆಪಿ ಆರ್.ಅಶೋಕ, ಸೋಮಣ್ಣರನ್ನು ಕಣಕ್ಕೆ ಇಳಿಸಿದ್ದು, ಬಿಜೆಪಿ ಇವರನ್ನು ಬಲಿ ಕಾ ಬಕ್ರಾ ಮಾಡಲು ಹೊರಟಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.