ಬೆಂಗಳೂರು: ಕಳೆದ ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ನೂತನ 10 ಜನ ಸಚಿವರಿಗೆ ಇಂದು ಖಾತೆ ಹಂಚಿ ಮಾಡಲಾಗ್ತಿದೆ ಅನ್ನೋದು ತಿಳಿದು ಬಂದಿದೆ. ಶನಿವಾರ ಹಾಗೂ ಭಾನುವಾರ ರಜೆಯ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಆಗಿರ್ಲಿಲ್ಲ. ಇಂದು ಯಾರಿಗೆ ಯಾವ ಖಾತೆ ಅನ್ನೋದು ನಿರ್ಧಾರವಾಗಲಿದೆ.
ರಮೇಶ ಜಾರಕಿಹೊಳಿ, ಬಿ.ಸಿ ಪಾಟೀಲ, ಎಸ್.ಟಿ ಸೋಮಶೇಖರ, ಬೈರತಿ ಬಸವರಾಜ ಸೇರಿದಂತೆ ಕೆಲವರು ಪ್ರಮುಖ ಖಾತೆಗಳು ಬೇಕೆಂದು ಪಟ್ಟು ಹಿಡಿದಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಅವರು ಕೇಳಿದ ಖಾತೆ ಕೊಟ್ಟು ಸಮಾಧನ ಮಾಡ್ತಾರೋ ಅಥವ ಬೇರೆ ರೀತಿಯ ಪ್ಲಾನ್ ಮಾಡ್ತಾರೋ ಅನ್ನೋ ಕುತೂಹಲವಿದೆ.
ಇದರ ನಡುವೆಯೇ ಸಚಿವ ಸ್ಥಾನ ಸಿಗದವರ ಆಟಾಟೋಪ ಜೋರಾಗಿದೆ. ಸಿಎಂ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ಶಾಸಕರು, ಉಳಿದಿರುವ 6 ಸಚಿವ ಸ್ಥಾನಗಳನ್ನ ಸಹ ಹಂಚಿಕೆ ಮಾಡಿ ನಮ್ಗೂ ಸಚಿವರನ್ನಾಗಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಇದರ ಜೊತೆಗೆ ದೆಹಲಿ ನಾಯಕರ ಜೊತೆಗೆ ಮಾತುಕತೆಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಸಿಎಂ ನಡೆ ಕತ್ತಿ ಅಂಚಿನ ಮೇಲಿನ ನಡಿಗೆಯಾಗಿದೆ.