ಪ್ರಜಾಸ್ತ್ರ ಸುದ್ದಿ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷ್ನರೇಟ್ ನಲ್ಲಿ ವೈಜ್ಞಾನಿಕ ಬದಲಾವಣೆಯ ಸ್ಪರ್ಶ ನೀಡಿದ್ದ ಪೊಲೀಸ್ ಆಯುಕ್ತ ಲಾಬೂರಾಮ್, ಇದೀಗ ಪದೋನ್ನತಿ ಹೊಂದಿದ ಪೊಲೀಸ್ ಸಿಬ್ಬಂದಿಗೆ ಕೌನ್ಸಲಿಂಗ್ ಮೂಲಕ ಕೋರಿಕೆಯಂತೆ ಪೊಲೀಸ್ ಠಾಣೆ ಹಂಚಿಕೆ ಮಾಡುವ ಮೂಲಕ ಮತ್ತೊಂದು ಬದಲಾವಣೆಗೆ ಮುಂದಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷ್ ನರ್ ವ್ಯಾಪ್ತಿಯಲ್ಲಿ ರಾಜಕೀಯ ಪ್ರಭಾವ ಬಳಸಿಕೊಂಡು ಅನೇಕರು ತಮಗೆ ಅನುಕೂಲವಾಗುವ ಠಾಣೆಗಳಿಗೆ ವರ್ಗ ಮಾಡಿಸಿಕೊಳ್ಳುತ್ತಿದ್ದರು. ಅಲ್ದೇ, ಹಲವು ವರ್ಷಗಳಿಂದಲೂ ಒಂದೇ ಠಾಣೆಯಲ್ಲಿಯೇ ಠಿಕಾಣಿ ಹೂಡಿದ್ರು. ಒಂದೊಮ್ಮೆ ವರ್ಗಾವಣೆಗೊಂಡರೂ ಪುನಃ ತಮ್ಮ ರಾಜಕೀಯ ಪ್ರಭಾವ ಬಳಸಿ ವಾಪಸ್ ಅದೇ ಠಾಣೆಗೆ ಬರ್ತಿದ್ದರು. ಆದರೀಗ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಇಂತಹ ಪರಂಪರೆಗೆ ಮಂಗಳ ಹಾಡಿದ್ದಾರೆ.
ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಪದೋನ್ನತಿ ಆಧಾರದ ಮೇಲೆ ಸಿಬ್ಬಂದಿಗೆ ಕೌನ್ಸಲಿಂಗ್ ನಡೆಸಿ, ಕೋರಿಕೆಯಂತೆ ಪೊಲೀಸ್ ಠಾಣೆ ಹಂಚಿಕೆಗೊಳಿಸಲು ನಿರ್ಧರಿಸಿದ್ದಾರೆ. ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಲು ರಾಜಕೀಯ ಪ್ರಭಾವ ಅನಿವಾರ್ಯ ಅನ್ನೋ ವಾತಾವರಣ ಮಟ್ಟ ಹಾಕಲು ಮುಂದಾಗಿದ್ದಾರೆ. ಈ ಮೂಲಕ ರಾಜಕೀಯ ಪ್ರಭಾವದ ಅವಶ್ಯಕತೆಯಿಲ್ಲದೆ ಪದೋನ್ನತಿ ಆಧಾರದ ಮೇಲೆ ವರ್ಗಾವಣೆಗೆ ಸ್ಪಷ್ಟ ಸಂದೇಶವನ್ನು ಆಯುಕ್ತ ಲಾಬೂರಾಮ್ ನೀಡಿದ್ದಾರೆ.