ಸ್ಯಾಂಡಲ್ ವುಡ್ ಅಂಗಳದ ಬಿಗ್ ಸ್ಟಾರ್ ನಟರಿಬ್ಬರ ದೋಸ್ತಿ ಹಳಸಿಹೋಗಿ ಬಹಳ ದಿನಗಳೇ ಕಳೆದಿವೆ. ಒಂದು ಕಾಲದ ಗೆಳೆಯರು ಇಂದು ದೂರ ದೂರ ಇದ್ದಾರೆ. ಅವರೇ ನಟ ದರ್ಶನ ಹಾಗೂ ಸುದೀಪ. ಇವರಿಬ್ಬರ ನಡುವಿನ ಶೀತಲ ಸಮರ ಇದೀಗ ಮತ್ತೆ ಮುಂದುವರೆದಿದೆ ಅಂತಾ ಹೇಳಲಾಗ್ತಿದೆ.
ಯೆಸ್, ನಟ ಆದಿತ್ಯ ನಟಿಸಿರುವ ‘ಮುಂದುವರೆದ ಅಧ್ಯಾಯ’ ಚಿತ್ರದ ಟ್ರೇಲರ್ ನಿನ್ನೆ ಸಂಜೆ ಖಾಸಗಿ ಹೋಟೆಲ್ ನಲ್ಲಿ ಲಾಂಚ್ ಆಗಿದೆ. ಬಾಲು ಚಂದ್ರಶೇಖರ ನಿರ್ದೇಶನದ ಚಿತ್ರದ ಟ್ರೇಲರ್ ಲಾಂಚ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ಮುಖ್ಯ ಅತಿಥಿಯಾಗಿ ಬಂದಿದ್ರು. ಗೆಳೆಯನ ಚಿತ್ರಕ್ಕೆ ಡಿ ಬಾಸ್ ಸಾಥ್ ನೀಡಿದ್ದಾರೆ. ದರ್ಶನ ಬರುವುದಕ್ಕೂ ಮೊದ್ಲು ಚಂದನವನದ ನಿರ್ದೇಶಕರ ಹೆಸರು ಮತ್ತು ಫೋಟೋ ಇರುವ ವಿಡಿಯೊಂದು ಪ್ಲೇ ಆಗಿದೆ. ಅದರಲ್ಲಿ ಸುದೀಪರನ್ನ ಕೈ ಬಿಡಲಾಗಿದ್ದು ಇದೀಗ ಇದು ವಿವಾದವಾಗಿದೆ.
ಕಾರ್ಯಕ್ರಮಕ್ಕೆ ನಟ ದರ್ಶನ ಬರುವುದಕ್ಕೂ ಮೊದ್ಲೇ ಪ್ಲೇ ಆದ ವಿಡಿಯೋದಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ ಆದಿಯಾಗಿ ಇತ್ತೀಚಿನ ನಿರ್ದೇಶಕರ ತನಕ ಹೆಸರು ಫೋಟೋ ಇದೆ. ಆದ್ರೆ, ಮೈ ಆಟೋಗ್ರಾಫ್, ಕೆಂಪೇಗೌಡ, ವೀರ ಮದಕರಿ, ಮಾಣಿಕ್ಯ, ಜಸ್ಟ್ ಮಾತ್ ಮಾತಲ್ಲಿ ಅನ್ನೋ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿರುವ ನಟ, ನಿರ್ದೇಶಕ ಕಿಚ್ಚ ಸುದೀಪ ಅವರ ಹೆಸರನ್ನ ಕೈ ಬಿಡಲಾಗಿದೆ. ಇದ್ಯಾಕೆ ಅನ್ನೋ ಪ್ರಶ್ನೆ ಗಾಂಧಿನಗರದಲ್ಲಿ ಮತ್ತೆ ಕೇಳಿ ಬರ್ತಿದೆ. ಇದು ಬೈ ಮಿಸ್ ಆಗಿದ್ದಾ? ಬೇಕೆಂತಲೇ ಮಾಡಿದ್ದಾ? ಏನು ಅನ್ನೋದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.