ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ ಪಿಎ ರಮೇಶ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈತನ ಸಾವು ಅಸಹಜವೆಂದು ದಾಖಲಿಸಿಕೊಂಡಿರುವ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ. ರಮೇಶ ಸಹೋದರ ಸತೀಶ ನೀಡಿದ ದೂರಿನ ಮೇಲೆ ಅಸಹಜ ಸಾವು ಎಂದು ದಾಖಲು ಮಾಡಿಕೊಳ್ಳಲಾಗಿದೆ.
ನಗರದ ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿ ಶನಿವಾರ ರಮೇಶ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಭಾನುವಾರ ರಾಮನಗರದ ಮೆಳೇಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ತನ್ನ ಸೂಸೈಡ್ ಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಅನ್ನೋದನ್ನ ಡೆತ್ ನೋಟ್ ನಲ್ಲಿ ಹೇಳಿದ್ದಾನೆ ಅನ್ನೋದು ತಿಳಿದು ಬಂದಿದೆ. ಅಲ್ದೇ, ಆತನ ಕುಟುಂಬಸ್ಥರು ಐಟಿ ಅಧಿಕಾರಿಗಳತ್ತಲೇ ಬೊಟ್ಟು ಮಾಡ್ತಿದ್ದಾರೆ.
ತನಿಖೆಗೆ ಎರಡು ತಂಡ :
ರಮೇಶ ಅಸಹಜ ಸಾವಿನ ಪ್ರಕರಣದ ತನಿಖೆಗೆ ಎರಡು ತಂಡವನ್ನ ರಚನೆ ಮಾಡಲಾಗಿದೆ. ಕೆಂಗೇರಿ ಗೇಟ್ ಉಪ ವಿಭಾಗದ ಎಸಿಪಿ ಮಂಜುನಾಥ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಧರ್ಮೇಂದ್ರ ನೇತೃತ್ವದ ಎರಡು ತಂಡಗಳನ್ನ ರಚನೆ ಮಾಡಲಾಗಿದೆ. ಈಗಾಗ್ಲೇ ರಮೇಶ ಕಾರು ಚಾಲಕ ಅನಿಲ ವಿಚಾರಣೆ ಮಾಡಲಾಗ್ತಿದೆ. ಇವರಿಬ್ಬರ ನಡುವೆ ಹೆಚ್ಚು ಒಡನಾಟವಿತ್ತು ಅನ್ನೋದು ತಿಳಿದು ಬಂದಿದೆ.
ರಮೇಶ ಬರೆದ ಡೆತ್ ನೋಟ್ ಎನ್ನಲಾಗ್ತಿರುವ ಪತ್ರದಲ್ಲಿನ ಕೈಬರಹ ಪರಿಶೀಲನೆ ನಡೆದಿದೆ. ಇದನ್ನ ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ಇದರ ಜೊತೆಗೆ ಕೊನೆ ಬಾರಿಗೆ ರಮೇಶ ಫೋನ್ ಮಾಡಿರುವ ನಂಬರ್ ಗಳು ಸೇರಿದಂತೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಿದ್ದಾರೆ.