ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಅತ್ಯುತ್ತಮ ನಟ ಸಂಚಾರಿ ವಿಜಯ ನಿಧನರಾಗಿದ್ದಾರೆ. ಕೇವಲ 38 ವರ್ಷದ ನಟ ಶನಿವಾರ ಮಧ್ಯರಾತ್ರಿ ಬೈಕ್ ಅಪಘಾತದಿಂದ ಗಂಭೀರ ಗಾಯಗೊಂಡಿದ್ರು. ಹೀಗಾಗಿ ನಗರದ ಬನ್ನೇರುಘಟ್ಟದ ಬಳಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ಬ್ರೇನ್ ಡೆಡ್ ಆಗಿ ಕೊನೆಯುಸಿರೆಳೆದಿದ್ದಾರೆ.
ಗಳೆಯ ನವೀನ ಜೊತೆಗೆ ಬೈಕ್ ನಲ್ಲಿ ಬರ್ತಿರುವಾಗ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು. ಇದ್ರಿಂದಾಗಿ ತಲೆಗೆ ಗಂಭೀರ ಗಾಯವಾಗಿದ್ದು ಆಪರೇಷನ್ ಮಾಡಲಾಗಿತ್ತು. ಆದ್ರೂ, ಅವರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಒಮ್ಮೆ ಹಾರ್ಟ್ ಅಟ್ಯಾಕ್ ಆಗಿದೆ, ಬ್ರೇನ್ ಸ್ಟ್ರೋಕ್ ಆಗಿದೆ, ದೇಹದ ಅಂಗಾಗಳೆಲ್ಲವೂ ಲೈಫ್ ಸೇಫ್ಟಿ ಮೇಲೆಯೇ ಕೆಲಸ ಮಾಡ್ತಿದ್ವು. ಕೊನೆಗೆ ಬ್ರೇನ್ ಡೆಡ್ ಆಗಿ ಒಬ್ಬ ಅತ್ಯುತ್ತಮ ನಟ ಬದುಕಿಗೆ ವಿದಾಯ ಹೇಳಿದರು.
ನಟ ಸಂಚಾರಿ ವಿಜಯ ನಿಧನದಿಂದ ಇಡೀ ಚಿತ್ರರಂಗಕ್ಕೆ ಶಾಕ್ ಆಗಿದೆ. ಓರ್ವ ಒಳ್ಳೆಯ ನಟ, ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಸಾವು ಕಂಡಿರುವುದು ನೋವು ತಂದಿದೆ. ಅವರ ಚೇತರಿಕೆಗಾಗಿ ರಾಜ್ಯಾದ್ಯಂತ ಪ್ರಾರ್ಥನೆ ಮಾಡಿಕೊಳ್ಳಲಾಗಿತ್ತು. ಆದ್ರೆ, ಅದು ಫಲಿಸಲಿಲ್ಲ. ನಟ ಸಂಚಾರಿ ವಿಜಯ ನಿಧನಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವ ಶ್ರೀರಾಮುಲು ಸೇರಿದಂತೆ ರಾಜಕೀಯ ನಾಯಕರು, ಕನ್ನಡ ಸಿನಿ ದುನಿಯಾ ಸೇರಿದಂತೆ ಕರ್ನಾಟಕದ ಜೊತೆಗೆ ಸಂತಾಪ ಸೂಚಿಸಿದೆ.
ನಟ ಸಂಚಾರಿ ವಿಜಯ ನಟನೆಯ ಚಿತ್ರಗಳು:
ರಂಗಭೂಮಿಯ ಮೂಲಕ ನಟನಾ ಜಗತ್ತು ಪ್ರವೇಶ ಮಾಡಿದ ನಟ ಸಂಚಾರಿ ವಿಜಯ, 2011ರಲ್ಲಿ ರಂಗಪ್ಪ ಹೋಗ್ಬಿಟ್ಟನಾ ಚಿತ್ರದ ಮೂಲಕ ಸಿನಿ ಪಯಣ ಶುರು ಮಾಡಿದರು. ರಾಮ ರಾಮ ರಘು ರಾಮ, ದಾಸವಾಳ, ಹರಿವು, ಒಗ್ಗರಣೆ, ನಾನು ಅವನಲ್ಲ ಅವಳು, ಕಿಲ್ಲಿಂಗ್ ವೀರಪ್ಪನ್, ಸಿನಿಮಾ ಮೈ ಡಾರ್ಲಿಂಗ್, ಸಿಪಾಯಿ, ರಿಕ್ತ, ಅಲ್ಲಮ, ಮಾರಿಕೊಂಡವರು, ನನ್ನ ಮಗಳೇ ಹೀರೋಯಿನ್, ಅವ್ಯಕ್ತ, ವರ್ತಮಾನ, ಕೃಷ್ಣ ತುಳಿಸಿ, 6ನೇ ಮೈಲಿ, ಪಾದರಸ, ನಾತಿಚರಾಮಿ, ಆಡುವ ಗೊಂಬೆ, ಜೆಂಟಲ್ ಮೆನ್, ಆಕ್ಟ್ 1978 ಚಿತ್ರಗಳಲ್ಲಿ ನಟಿಸಿದ್ದಾರೆ. ಆಟಕ್ಕುಂಟು ಲೆಕ್ಕಕಿಲ್ಲ, ಮೇಲೊಬ್ಬ ಮಾಯಾವಿ ಚಿತ್ರಗಳು ಶೂಟಿಂಗ್ ಹಂತದಲ್ಲಿದ್ವು.
2015ರಲ್ಲಿ ನಾನು ಅವನಲ್ಲ ಅವಳು ಚಿತ್ರಕ್ಕೆ 62ನೇ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಈ ಪ್ರಶಸ್ತಿ ರೇಸಿನಲ್ಲಿ ಆಮೀರ್ ಖಾನ್, ಶಾಹೀದ್ ಕಪೂರ್ ಇದ್ದರು. ಅಲ್ದೇ, ಇದೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. 2016ರಲ್ಲಿ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿನ ನಟನೆಗಾಗಿ ಬೆಸ್ಟ್ ಸಪೋರ್ಟಿಂಗ್ ಸೈಮಾ ಅವಾರ್ಡ್ ಪಡೆದರು.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯ ನಟ ವಿಜಯ, ರಂಗಭೂಮಿ ಮೂಲಕ ನಟನೆಯನ್ನ ಶುರು ಮಾಡಿದವರು. ಸಾಕಷ್ಟು ಕಷ್ಟಪಟ್ಟು ಸಿನಿಮಾ ಪ್ರಪಂಚಕ್ಕೆ ಬಂದು ಹೆಸರು ಮಾಡಿದರು. ಹಲವು ಸಮಾಜಮುಖಿ ಕೆಲಸಗಳ ಮೂಲಕ ಜನರ ಕಷ್ಟಕ್ಕೆ ಮಿಡಿಯುತ್ತಿದ್ದರು. ಕರೋನಾ ಲಾಕ್ ಡೌನ್ ನಲ್ಲಿ ಅಸಂಖ್ಯಾತ ಜನರಿಗೆ ಸಹಾಯ ಮಾಡಿದ್ದಾರೆ. ಅದರಂತೆ ಶನಿವಾರ ಸಹ ಅವರ ಕೆಲಸ ಮುಗಿಸಿಕೊಂಡು ಬರ್ತಿರುವ ಬೈಕ್ ಸ್ಕಿಡ್ ಆಗಿ ಈ ದುಂತ ಸಂಭವಿಸಿದೆ.