ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ತಂತ್ರಾಂಶದ ಮೂಲಕ ಪಾಣಿ ಕೊಡುತ್ತಿರುವುದು ದೇಶದಲ್ಲೇ ಮೊದಲು. ತಾಂತ್ರಿಕ ಸಮಸ್ಯೆಯಿದ್ದರೆ ನಾವು ಬಗೆಹರಿಸುತ್ತೇವೆ. ಪ್ರತಿಯೊಬ್ಬರು ಆಯುಷ್ಮಾನ್ ಭಾರತ ಕಾರ್ಡ್ ಮಾಡಿಸಿಕೊಳ್ಳಬೇಕು. ಗ್ರಾಮ್ ಒನ್ ನಲ್ಲಿ ಇದುವರೆಗೂ ಮೂರು ಸಾವಿರ ಜನರು ಮಾತ್ರ ಪಡೆದಿದ್ದೀರಿ. ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಹೊಲಗಳಿಗೆ ದಾರಿ ಬಿಡುವ ವಿಚಾರದಲ್ಲಿ ಯಾರೂ ಪ್ರತಿಷ್ಠೆಗೆ ಇಳಿಯಬಾರದು. ಅಧಿಕಾರಿಗಳು, ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾ, ಕೋರ್ಟ್ ಎಂದು ಅಲೆಯುವ ಬದಲು ಗ್ರಾಮದ ಮುಖಂಡರು ಕೂಡಿ ಚರ್ಚಿಸಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದರು.
ಶಾಸಕ ರಮೇಶ ಭೂಸನೂರ ಹಾಗೂ ಅಧಿಕಾರಿಗಳು ವಿವಿಧ ಇಲಾಖೆಗೆ ಸಂಬಂಧಿಸಿದ ಫಲಾನುಭವಿಗಳಿಗೆ ಹಕ್ಕು ಪತ್ರ, ಕಿಟ್ ವಿತರಣೆ ಮಾಡಿದರು. ಮಲಘಾಣ, ಸೋಮಜಾಳ, ಮಂಗಳೂರು, ಆಸಂಗಿಹಾಳ ಸೇರಿ 76 ಅರ್ಜಿಗಳು ಬಂದಿದ್ದವು. ಅಧಿಕಾರಿಗಳ ಮಟ್ಟದಲ್ಲಿ ಪರಿಹಾರ ನೀಡುವುದನ್ನು ಒದಗಿಸಲಾಯಿತು. ಸರ್ಕಾರಿ ಮಟ್ಟದಲ್ಲಿರುವುದನ್ನು ತಿಳಿಸಲಾಯಿತು.
ಇನ್ನು ಡಿಸಿ, ಎಸಿ ಸೇರಿದಂತೆ ಇತರೆ ಅಧಿಕಾರಿಗಳು ಗ್ರಾಮ ಸಂಚಾರ ನಡೆಸಿ ಐತಿಹಾಸಿಕ ದೇಗುಲ, ರಸ್ತೆ, ಚರಂಡಿ, ಶೌಚಾಲಯ ಸಮಸ್ಯೆಯ ಕುರಿತು ಮಾಹಿತಿ ಪಡೆದು ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ವೇಳೆ ಜಿ.ಪಂ ಸಿಇಒ ರಾಹುಲ್ ಶಿಂಧೆ, ಇಂಡಿ ಎಸಿ ಎಂ.ಎನ್ ಚೋರಗಸ್ತಿ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಶೀಬಾಯಿ ಜಾಧವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.