ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೆಎಸ್ಆರ್ ಟಿಸಿ ಸಿಬ್ಬಂದಿಯನ್ನ ಖಾಯಂ ಸರ್ಕಾರಿ ನೌಕರರನ್ನಾಗಿ ಮಾಡಿಯೆಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗ್ತಿದೆ. ಅದರಂತೆ ಗುರುವಾರದಿಂದ ಸಹ ಹೋರಾಟ ನಡೆದಿದ್ದು, ಶುಕ್ರವಾರ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗ್ತಿದೆ.
ಬಸ್ ಬಂದ್ ಮಾಡಿ ಮುಷ್ಕರ ಮಾಡುವಂತೆ ಮಾಡಿದ್ದೇ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಂದು ಹೇಳಲಾಗ್ತಿದೆ. ಗುರುವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಚಾಲಕ ಹಾಗೂ ನಿರ್ವಾಹಕರು ಮನವಿ ಕೊಡಲು ಬಂದಾಘ, ಅದನ್ನ ಸ್ವೀಕರಿಸದೆ ಇರೋದು.. ಕಡೆ ಪಕ್ಷ ಸಚಿವರ ಪರವಾಗಿ, ಸರ್ಕಾರದ ಪರವಾಗಿ ಒಬ್ಬ ಅಧಿಕಾರಿಯಿಂದಲೂ ಮನವಿ ಸ್ವೀಕರಿಸಲು ಹೇಳದೆ ಇರೋದು.. ಇನ್ನು ಪ್ರತಿಭಟನೆ ಮಾಡ್ತಿದ್ದ ಕೆಎಸ್ಆರ್ ಟಿಸಿ ಸಿಬ್ಬಂದಿಯನ್ನ ಬಂಧಿಸಿರುವುದು.
ಹೋರಾಟ, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಹಕ್ಕು. ಆದ್ರೆ, ರಾಜ್ಯ ಸರ್ಕಾರ ಅದನ್ನ ದಮನ ಮಾಡುವ ಕೆಲಸ ಮಾಡ್ತಿದೆ. ಕೆಎಸ್ಆರ್ ಟಿಸಿ ಸಿಬ್ಬಂದಿ ಮನವಿ ಕೊಡುವುದು ಹಾಗೂ ಸಾಂಕೇತಿಕ ಪ್ರತಿಭಟನೆ ಮಾಡುವುದಾಗಿತ್ತು. ಆದ್ರೆ, ಸಿಬ್ಬಂದಿಯ ಬಂಧನವಾಗಿರುವುದಕ್ಕೆ ರೊಚ್ಚಿಗೆದ್ದರು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸಹ ಬಸ್ ಬಂದ್ ಮಾಡಿ ಮುಷ್ಕರ ಮಾಡುವಂತೆ ಈ ಸಂದರ್ಭದಲ್ಲಿ ಹೇಳಿದ್ದು ಅವರಿಗೆ ಮತ್ತಷ್ಟು ಬಂಬಲ ನೀಡಿದಂತಾಗಿ ಶುಕ್ರವಾರ ಸಂಚಾರ ನಿಲ್ಲಿಸಿದ್ರು. ಇದು ಶನಿವಾರ ಸಹ ಮುಂದುವರೆಯುವ ಲಕ್ಷಣಗಳಿವೆ.
ಈಗಾಗ್ಲೇ ಕೆಎಸ್.ಆರ್ ಟಿಸಿ ನೌಕರರ ಸಂಘದ ಮುಖಂಡರ ಜೊತೆ ಸಚಿವ ಸವದಿ ನಡೆಸಿದ ಮಾತುಕತೆ ವಿಫಲವಾಗಿದೆ. ಹೀಗಾಗಿ ಇದನ್ನೆಲ್ಲ ನೋಡ್ತಿದ್ರೆ, ಹಾದಿ ಬೀದಿ ರಂಪಾಟಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಾರಣ ಅನ್ನೋ ಮಾತು ಬಲವಾಗಿ ಕೇಳಿ ಬರ್ತಿದೆ.
ಇನ್ನು ಕೆಎಸ್ಆರ್ ಟಿಸಿ ಒಂದು ನಿಗಮ ಮಂಡಳಿಯಾಗಿದೆ. ನೌಕರಿಗೆ ಸೇರುವ ಸಂದರ್ಭದಲ್ಲಿಯೇ ಪೂರ್ಣ ಪ್ರಮಾಣದ ಸರ್ಕಾರಿ ನೌಕರಿ ಅಲ್ಲವೆಂದು ಹೇಳಲಾಗಿರುತ್ತದೆಯಂತೆ. ಅಲ್ದೇ, ಈ ಸಂಬಂಧ ಅರ್ಜಿಯಲ್ಲಿ ಸಹಿ ಸಹ ಹಾಕಿಸಿಕೊಂಡಿರಲಾಗುತ್ತದೆಯಂತೆ. ಹೀಗಾಗಿ ಇವರನ್ನ ಪೂರ್ಣ ಪ್ರಮಾಣದ ಸರ್ಕಾರಿ ನೌಕರರನ್ನಾಗಿ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನ್ನಲಾಗ್ತಿದೆ. ಒಟ್ಟಿನಲ್ಲಿ ಪ್ರಯಾಣಿಕರು ಪರದಾಡ್ತಿರುವುದು ಮಾತ್ರ ಸತ್ಯ.