ಅಥಣಿ: ತಾಲೂಕಿನ ಕೃಷ್ಣಾ ನದಿಗೆ ಕಟ್ಟಲಾದ ಹಿಪ್ಪರಗಿ ಅಣೆಕಟ್ಟೆಯಿಂದ ನೀರು ಬಿಡಬಾರದೆಂದು ಕೃಷ್ಣಾ ನದಿ ನೀರಿನ ಮೇಲೆ ಅವಲಂಬಿತವಾದ ಗ್ರಾಮಗಳ ಮುಖಂಡರು ಮನವಿ ಸಲ್ಲಿಸಿದ್ದಾರೆ. ಹಿಪ್ಪರಗಿ ಅಣೆಕಟ್ಟು ಪುನಃರ್ವಸತಿ ಹಾಗೂ ಪುನರ್ ರ್ನಿರ್ಮಾಣ ವೃತ್ತ ಕಛೇರಿಯ ಕಾರ್ಯನಿರ್ವಾಹಕ ಅಭಿಯಂತರ ಅಧಿಕಾರಿ ಅರುಣ ಯಲಗುದ್ರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಇರುವುದರಿಂದ, ಈ ಬೇಸಿಗೆ ಕಳೆಯುವದು ಕಷ್ಟವಿದೆ. ಇಂತಹ ಸಂದರ್ಭದಲ್ಲಿ ಹಿಪ್ಪರಗಿ ಅಣೆಕಟ್ಟೆಯಿಂದ ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಬ್ಯಾರೇಜಗೆ ನೀರು ಹರಿಸುವುದಕ್ಕೆ ಈ ಭಾಗದ ರೈತರು ಆತಂಕಕ್ಕೊಳಗಾದ್ದಾರೆ. ಹೀಗಾಗಿ ಈ ಮನವಿಗೆ ಸ್ಪಂದಿಸಿ ಇಲಾಖಾ ಅಧಿಕಾರಿಗಳು ಯಾವುದೆ ಕಾರಣಕ್ಕೆ ನೀರು ಬಿಡಬಾರದು ಎಂದು ಕೇಳಿಕೊಂಡಿದ್ದಾರೆ.
ಈ ವೇಳೆ ಗುರುಬಸು ತೇವರಮನಿ, ಹಲ್ಯಾಳದ ಕುಮಾರಗೌಡ ಪಾಟೀಲ, ಶ್ರೀಶೈಲ ನಾರಗೊಂಡ, ರಾಜು ನಾಡಗೌಡ, ಆನಂದ ಕುಲಕರ್ಣಿ, ರಾಮಣ್ಣಾ ಗುಮತಾಜ ಸೇರಿದಂತೆ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.